ಗುಂಡ್ಲುಪೇಟೆ: ಗ್ರಾಹಕರಿಗೆ ಆಗುವ ಶೋಷಣೆಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಿರಬೇಕೆಂದು ಜೆ.ಎಂ. ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಆರ್. ರಾಘವೇಂದ್ರ ಶುಕ್ರವಾರ ಕರೆ ನೀಡಿದರು.
ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಹಕರ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ಇಂದಿನ ಸನ್ನಿವೇಶದಲ್ಲಿ ವ್ಯಾಪಾರದಲ್ಲಿ ಕಂಡು ಬರುವ ಮೋಸ, ವಂಚನೆ ಅರಿಯಬೇಕು. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡರೆ ಮಾತ್ರ ಅದರ ವಿರುದ್ಧ ಹೋರಾಡಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಕಾನೂನಿನ ಬಗ್ಗೆಯೂ ತಿಳಿದುಕೊಳ್ಳಬೇಕು. ಮತ್ತು ಅದನ್ನು ಜನರಿಗೆ ತಿಳಿಸಿ ಜಾಗರೂಕರಾಗುವಂತೆ ಮಾಡಲು ಶ್ರಮವಹಿಸಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಗ್ರಾಹಕರ ಕ್ಲಬ್ ಮೂಲಕ ಅನೇಕ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಪಿ. ಮಂಜುನಾಥ್, ಗ್ರಾಹಕರ ಹಕ್ಕುಗಳ ಸಂರಕ್ಷಣಾ ಕಾಯಿದೆಯ ಬಗ್ಗೆ ವಕೀಲ ಎಚ್.ವಿ. ರವಿಕಾಂತ್ ಉಪನ್ಯಾಸ ನೀಡಿದರು. ಮಕ್ಕಳ ಹಕ್ಕುಗಳ ಬಗ್ಗೆ ಹಿರಿಯ ವಕೀಲ ಜಿ.ಬಿ. ನಂಜಪ್ಪ ಮಾತನಾಡಿದರು. ಪ್ರಾಚಾರ್ಯ ರವೀಂದ್ರಕುಮಾರ್ ಪಿಳ್ಳೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರುಗಳಾದ ಮಹೇಶ್, ಬೈರವೇಶ್, ಗಿರೀಶ್, ನಾಗೇಂದ್ರ ಭಾಗವಹಿಸಿದ್ದರು.