ಸಿಂಗಪುರ (ಪಿಟಿಐ): ಸುನಿಲ್ ಚೆಟ್ರಿ ತಂಡ ಸೇರಿಕೊಂಡಿರುವ ಕಾರಣ ಚರ್ಚಿಲ್ ಬ್ರದರ್ಸ್ನ ಆಟಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಹೀಗಾಗಿ ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯ `ಇ' ಗುಂಪಿನಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ವಾರಿಯರ್ಸ್ ತಂಡದ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಚರ್ಚಿಲ್ ತಂಡದ ಆಟಗಾರರಾದ ಸುನಿಲ್ ಚೆಟ್ರಿ, ಅಫ್ಘಾನಿಸ್ತಾನದ ಬಲಾಲ್ ಅರೆಜೌ ಮತ್ತು ತಂಡದ ಮುಖ್ಯಸ್ಥ ಚರ್ಚಿಲ್ ಅಲೆಮಾವೋ ಅವರಿಗೆ ಮುಂಬೈನಲ್ಲಿರುವ ಸಿಂಗಪುರ ರಾಯಭಾರಿ ಕಚೇರಿ ಯಾವುದೇ ಕಾರಣ ನೀಡದೇ ವೀಸಾ ನಿರಾಕರಿಸಿತ್ತು. ಆದರೆ, ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದ ಬಳಿಕ ವೀಸಾ ಸೋಮವಾರ ವೀಸಾ ನೀಡಲಾಯಿತು.
ಪುಣೆಯಲ್ಲಿ ಏಪ್ರಿಲ್ 2ರಂದು ನಡೆದ ಪಂದ್ಯವನ್ನು ಚರ್ಚಿಲ್ ಬ್ರದರ್ಸ್ ತಂಡವು 3-0ಯಿಂದ ವಾರಿಯರ್ಸ್ ತಂಡದ ವಿರುದ್ಧ ಗೆದ್ದುಕೊಂಡಿತ್ತು. ಈ ಜಯದೊಂದಿಗೆ ಚರ್ಚಿಲ್ ಬ್ರದರ್ಸ್ ತನ್ನ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ವಾರಿಯರ್ಸ್ ತಂಡ ತನ್ನದೇ ನೆಲದಲ್ಲಿ ಆಡುವ ಕಾರಣ, ಗೆಲ್ಲುವ ವಿಶ್ವಾಸದಲ್ಲಿದೆ.
ಈ ಬಗ್ಗೆ ಮಾತನಾಡಿದ ತಂಡದ ತಾಂತ್ರಿಕ ನಿರ್ದೇಶಕ ಸುಭಾಷ್ ಭೌಮಿಕ್, `ಅಭ್ಯಾಸ ಪಂದ್ಯದಲ್ಲಿ ಆಡದಿರಲು ಚೆಟ್ರಿ ಒಪ್ಪಿಕೊಳ್ಳಲಿಕ್ಕಿಲ್ಲ. ಆದ್ದರಿಂದ ಅರೆಜೌಗೆ ವಿಶ್ರಾಂತಿ ಕೊಡುವ ಬಗ್ಗೆ ಚಿಂತಿಸಿದ್ದೇನೆ' ಎಂದರು.