ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಗುರುವಾರ ನಡೆಯಿತು.
ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4 ನಾಮಪತ್ರಗಳು ತಿರಸ್ಕೃತ ಗೊಂ ಡಿವೆ. ಗದಗ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ನರಗುಂದ ಕ್ಷೇತ್ರದಲ್ಲಿ 2, ಶಿರಹಟ್ಟಿ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ನಾಮಪತ್ರ ತಿರಸ್ಕೃತವಾಗಿದೆ.
ಜೆಡಿಎಸ್ ಮತ್ತು ಪಕ್ಷೇತರರಾಗಿ ನರಗುಂದದಿಂದ ಬಸವರಾಜ ಸಾಬಳೆ ಎರಡು ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದರು. ಪಕ್ಷದಿಂದ ಸಲ್ಲಿಸಿದ್ದ ನಾಮಪತ್ರಕ್ಕೆ ಬಿ ಫಾರಂ ಸಲ್ಲಿಸದ ಕಾರಣ ತಿರಸ್ಕೃತ ಗೊಂಡಿದೆ. ಅದೇ ರೀತಿ ಕಾಂಗ್ರೆಸ್ನಿಂದ ಶಕುಂತಲಾ ಕೊಂಡಾಬಿಂಗಿ ಸಲ್ಲಿಸಿದ ನಾಮಪತ್ರಕ್ಕೆ ಬಿ ಫಾರಂ ಸಲ್ಲಿಸದ ಕಾರಣ ತಿರಸ್ಕೃತಗೊಂಡಿದೆ. ರೋಣ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಶರಣಪ್ಪ ಶಿವಪ್ಪ ಎಂಬುವರು ಕಡಿಮೆ ಸೂಚಕರನ್ನು ನಮೂದಿಸಿದ್ದರಿಂದ ತಿರಸ್ಕೃತಗೊಂಡಿದೆ.
ಶಿರಹಟ್ಟಿಯಲ್ಲಿ ಪಕ್ಷೇತರರಾಗಿ ರಾಮಪ್ಪ ಹನುಮಂತಪ್ಪ ಬಂಡಿ ವಡ್ಡರ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.