ನಾಸಿಕ್ (ಪಿಟಿಐ): `ಪೊಲೀಸರು ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡುತ್ತಿದ್ದಾರೆ' ಎಂದು ಮುಂಬೈನಲ್ಲಿ 26/11ರಂದು ನಡೆದ ದಾಳಿಯ ಪ್ರಮುಖ ಸಂಚುಕೋರ ಮತ್ತು ಮಹಾರಾಷ್ಟ್ರ ಪೊಲೀಸ್ ಅಕಾಡೆಮಿ ಮೇಲೆ ನಡೆದ ದಾಳಿಯ ಮುಖ್ಯ ಆರೋಪಿ ಸಯೀದ್ ಜಬೀಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಸ್ಥಳೀಯ ನ್ಯಾಯಾಲಯದಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾನೆ.
ಸರ್ಕಾರಿ ಅಭಿಯೋಜಕರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಜುಂದಾಲ್ ಮತ್ತು ಪ್ರಕರಣದ ಇತರ ಇಬ್ಬರು ಆರೋಪಿಗಳನ್ನು ಶುಕ್ರವಾರ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
`ಸೌದಿ ಅರೇಬಿಯಾದಿಂದ ಭಾರತಕ್ಕೆ ಕರೆತಂದ ಬಳಿಕ ದೆಹಲಿ, ಮುಂಬೈ ಮತ್ತು ಅಪರಾಧ ವಿಭಾಗದ ಪೊಲೀಸರು ಹಾಗೂ ಎ.ಟಿ.ಎಸ್. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ' ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಜುಂದಾಲ್ ಆರೋಪಿಸಿದ್ದಾನೆ.