ಸೋಮವಾರಪೇಟೆ: ಲಖನೌದ ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ವತಿಯಿಂದ ಆಯೋಜಿ ಸಲಾಗಿರುವ ಜೂನಿಯರ್ ಇಂಡಿಯಾ ಕಬಡ್ಡಿ ಶಿಬಿರದಲ್ಲಿ ಸೋಮವಾರಪೇಟೆಯ ರಂಜಿತಾ ತರಬೇತಿ ಪಡೆಯುತ್ತಿದ್ದಾರೆ.
ಲಖನೌದಲ್ಲಿ ಸೆ.25 ರಿಂದ ಆರಂಭವಾಗಿರುವ ಕ್ಯಾಂಪ್ನಲ್ಲಿ ರಂಜಿತಾ ಭಾಗವಹಿಸಿದ್ದು, ಮುಂದಿನ ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯುವ ಹಾದಿಯಲ್ಲಿದ್ದಾರೆ.
ಸೋಮವಾರಪೇಟೆ ಸಮೀಪದ ಹಾನಗಲ್ ಗ್ರಾಮದ ಕುಶಾಲಪ್ಪ ಹಾಗೂ ಸರೋಜ ದಂಪತಿಯ ಪುತ್ರಿಯಾದ ರಂಜಿತಾಗೆ ತಂದೆಯ ಕಬಡ್ಡಿ ಆಟವೇ ಪ್ರೇರಣೆ. ಚಿಕ್ಕ ವಯಸ್ಸಿನಿಂದಲೂ ತನ್ನನ್ನು ಕಬಡ್ಡಿಯಲ್ಲಿ ತೊಡಗಿಸಿಕೊಂಡ ಈಕೆ ಹಂತ ಹಂತವಾಗಿ ಸಾಧನೆ ತೋರುತ್ತಿದ್ದಾರೆ. ಕರ್ನಾಟಕ ತಂಡದ ನಾಯಕಿಯಾಗಿ ಉತ್ತಮ ಪ್ರದರ್ಶನ ತೋರ್ದ್ದಿದಾರೆ.
ಜ್ಞಾನ ವಿಕಾಸ ಶಾಲೆಯಲ್ಲಿ 6ನೇ ತರಗತಿಯಲ್ಲಿ ಇರುವಾಗ ವಿಭಾಗೀಯ ಮಟ್ಟದ ಕಬಡ್ಡಿಯಲ್ಲಿ ಸ್ಪರ್ಧಿಸುವ ಮೂಲಕ ಭರವಸೆ ಮೂಡಿಸಿದರು. ನಂತರ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು. ನಂತರ ಕೊಯಮತ್ತೂರಿನಲ್ಲಿ ನಡೆದ ಸಬ್ ಜೂನಿಯರ್, ನ್ಯಾಷನಲ್ ಸಬ್ ಜೂನಿಯರ್ನಲ್ಲಿ ಚಿನ್ನದ ಪದಕ ಪಡೆದರು.
ಈಕೆಯ ಪ್ರತಿಭೆ ಗುರುತಿಸಿ ಕಾಣಿಯೂರಿನ ಪ್ರಗತಿ ಶಾಲೆ ಉಚಿತವಾಗಿ ಶಿಕ್ಷಣ ನೀಡಲು ಮುಂದೆ ಬಂದಿತು. ನಂತರ 2010ರಲ್ಲಿ ಆಂಧ್ರಪ್ರದೇಶದ ನಲಗೊಂಡ ಹಾಗೂ ಪಂಜಾಬ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ತೋರಿದರು.
2011ರಲ್ಲಿ ಮಧ್ಯಪ್ರದೇಶದ ಬರಾನ್ಪುರ್ ಹಾಗೂ ಛತ್ತೀಸ್ಗಡ್ನಲ್ಲಿ ನಡೆದ ರಾಷ್ಟ್ರ ಮಟ್ಟದ ಜೂನಿಯರ್ ಕಬಡ್ಡಿಯಲ್ಲಿ ಭಾಗವಹಿಸಿದರು. ಕಳೆದ ವರ್ಷ ಕರ್ನಾಟಕ ತಂಡದ ನಾಯಕಿಯಾಗಿ ಆಯ್ಕೆಯಾಗಿ ಆಂಧ್ರಪ್ರದೇಶದ ಗುಂಟೂರು ಹಾಗೂ ಗುಜರಾತ್ನ ವಡೋದರದಲ್ಲಿ ನಡೆದ ಇಲಾಖಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಮುನ್ನೆಡೆಸಿದ್ದಾರೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಕರ್ನಾಟಕ ಸೋಲು ಅನುಭವಿಸಿದರೂ ಇವರ ಉತ್ತಮ ಆಟವನ್ನು ಗುರುತಿಸಿದ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ, ಜೂನಿಯರ್ ಇಂಡಿಯಾ ಕಬಡ್ಡಿ ಕ್ಯಾಂಪ್ಗೆ ಆಯ್ಕೆ ಮಾಡಿದೆ.
ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ರಂಜಿತಾಗೆ ಪ್ರಮೋದ್ಕುಮಾರ್ ಹಾಗೂ ಹಂಸವತಿ ತರಬೇತಿ ನೀಡುತ್ತಿದ್ದಾರೆ. ಚೌಡ್ಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ತಂಗಮ್ಮ ಕೂಡಾ ರಂಜಿತಾ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅ. 25ರ ವರೆಗೆ ಜೂನಿಯರ್ ಇಂಡಿಯಾ ಕಬಡ್ಡಿ ಶಿಬಿರ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.