ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಸಂಚು ಕುರಿತು ತನಿಖೆ ನಡೆಸುತ್ತಿದ್ದ ಮುಖ್ಯ ತನಿಖಾಧಿಕಾರಿಯನ್ನು ಸಿಬಿಐ ನಿರ್ದೇಶಕ ರಂಜಿತ್ ಕುಮಾರ್ ಸಿನ್ಹಾ ಅವರು ಸದ್ದುಗದ್ದಲವಿಲ್ಲದೆ ಸೇವೆಯಿಂದ ತೆಗೆದು ಹಾಕಿದ್ದಾರೆ.
ಈ ಮೂಲಕ, `ಯುಪಿಎ ಸರ್ಕಾರದ ತಾಳಕ್ಕೆ ತಕ್ಕಂತೆ ತಾನು ಕುಣಿಯಲು ಸಿದ್ಧವಿಲ್ಲ' ಎಂಬ ಸಂದೇಶವನ್ನು ರಂಜಿತ್ ಕುಮಾರ್ ಅವರು ರವಾನಿಸಿದ್ದಾರೆಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಈ ಸೂಕ್ಷ್ಮ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಮಿಶ್ರಾ ಅವರಿಗೆ, `ನಿಮ್ಮ ಸೇವೆ ಅಗತ್ಯವಿಲ್ಲ' ಎಂದು ಮೌಖಿಕವಾಗಿ ಹೇಳಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
2006ರಲ್ಲಿ ನಿವೃತ್ತರಾಗಿದ್ದ ಮಿಶ್ರಾ ಅವರನ್ನು ಪುನಃ ಅದೇ ಹುದ್ದೆಗೆ ನೇಮಕ ಮಾಡಲಾಗಿತ್ತು. ನಂತರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜೀವ್ ಗಾಂಧಿ ಹತ್ಯೆ ಸಂಚಿನ ಮುಖ್ಯ ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.