ಧಾರವಾಡ: ಭಾರತೀಯ ರಿಪಬ್ಲಿಕನ್ ಪಕ್ಷ ಹಾಗೂ ಸಮತಾ ಸೈನಿಕ ದಳದ ಸಂಯುಕ್ತ ಆಶ್ರಯದಲ್ಲಿ 75 ವರ್ಷಗಳ ದಲಿತ ರಾಜಕಾರಣ ಕುರಿತು ರಾಜ್ಯಮಟ್ಟದ ಸಮಾವೇಶವನ್ನು ಜ. 28 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಎಂ.ವೆಂಕಟಸ್ವಾಮಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 10.30ಕ್ಕೆ ಮಾಜಿ ಸಚಿವ ಡಾ. ಯೋಗೇಂದ್ರ ಮಕ್ವಾನ್ ಉದ್ಘಾಟಿಸುವರು. ಆರ್ಪಿಐ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳೆ ಅಧ್ಯಕ್ಷತೆ ವಹಿಸುವರು. ಹಿರಿಯ ರಾಜಕಾರಣಿ ಬೊಜ್ಯಾತಾರಕಂ ಆಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರತಿಪಕ್ಷದ ನಾಯಕಿ ಮೋಟಮ್ಮ, ಸಚಿವ ಗೋವಿಂದ ಕಾರಜೋಳ, ಬಿ.ಸೋಮಶೇಖರ, ಮಾರಸಂದ್ರ ಮುನಿಯಪ್ಪ, ಮಾರುತಿ ಮಾನ್ಪಡೆ, ನಾಗರಾಜ, ಪ್ರಭಾವತಿ ಆಗಮಿಸುವರು ಎಂದರು.
ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಗೋಷ್ಠಿಯಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅಂಬೇಡ್ಕರ್ ಅಧ್ಯಯನ ಕೇಂದ್ರಗಳ ನಿರ್ದೇಶಕರು, ದಲಿತ ಚಳವಳಿಯ ಮುಖಂಡರು, ದಲಿತ ಸಾಹಿತಿಗಳು, ದಲಿತ ಚಿಂತನೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.