ಬೆಂಗಳೂರು: ಮೀನಿನ ಸರಕು ತುಂಬಿದ್ದ ಕ್ಯಾಂಟರ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಶಿವಾಜಿನಗರ ಬಳಿಯ ರಸೆಲ್ ಮಾರ್ಕೆಟ್ನಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಕುಖ್ಯಾತ ರೌಡಿ ಕೋಳಿ ಫಯಾಜ್ ಅವರ ಪುತ್ರ ಅಮಿರ್ಖಾನ್ ಅಲಿಯಾಸ್ ಪಪ್ಪು ಮತ್ತು ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ವರ್ತಕರು ಆರೋಪಿಸಿದ್ದಾರೆ.
ಮೀನು ತುಂಬಿದ್ದ ಕ್ಯಾಂಟರ್ ಗುರುವಾರ ರಾತ್ರಿ ರಸೆಲ್ ಮಾರ್ಕೆಟ್ಗೆ ಬಂದಿತ್ತು. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕ್ಯಾಂಟರ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಚಾಲಕ ಮತ್ತು ಕ್ಲೀನರ್ ಎಚ್ಚರಗೊಂಡಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಪ್ಪು ಇಲ್ಲಿನ ವರ್ತಕರ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ವರ್ತಕರು ಮತ್ತು ಪಪ್ಪು ಸಹಚರರ ನಡುವೆ ಜಗಳವಾಗಿತ್ತು. ಈ ಸಂಬಂಧ ವರ್ತಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಇದರಿಂದ ಕೋಪಗೊಂಡು ಆತನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.