ಗದಗ: ಕುಡಿಯುವ ನೀರಿಗೆ ಆಗ್ರಹಿಸಿ ಬೆಟಗೇರಿ ಭಾಗದ ಕನ್ಯಾಳ ಅಕ್ಕಿ ಓಣಿ ಮಹಿಳೆಯರು ಶನಿವಾರ ರಸ್ತೆತಡೆ ನಡೆಸಿದರು.
ನಗರದ ಕನ್ಯಾಳ ಅಕ್ಕಿ ಓಣಿಯ ಮಹಿಳೆಯರು ಬೆಳಿಗ್ಗೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ರಸ್ತೆತಡೆ ನಡೆಸಿ, ನಗರಸಭೆ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಇಪ್ಪತ್ತು ದಿನಗಳಿಂದ ಕುಡಿಯಲು ತುಂಗಾಭದ್ರ ನೀರು ಬಿಟ್ಟಿಲ್ಲ. ಸವಳು ನೀರು ಸಹ ಬಂದ್ ಮಾಡಲಾಗಿದೆ. ಹೀಗಾಗಿ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ವಾರ್ಡ್ ಸದಸ್ಯೆ ಮಂಜುಳಾ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸವಳು ನೀರನ್ನು ಮೂರು ಕಿ.ಮೀ. ದೂರದಿಂದ ತರಬೇಕು. ಪುರುಷರು ಕೂಲಿಗಾಗಿ ಹೊರಗೆ ಹೋಗುತ್ತಾರೆ. ಮಹಿಳೆಯರೇ ದೂರದ ಪ್ರದೇಶದಿಂದ ನೀರು ತರಬೇಕಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ನೀರು ಬಿಡುವಂತೆ ನಗರಸಭೆ ಅಧಿಕಾರಿಯನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುವುದಿಲ್ಲ. ಗಾರಗಿಪೇಟೆಯಲ್ಲಿ ಮೋಟಾರು ಕೆಟ್ಟಿದ್ದು, ದುರಸ್ತಿಯಾಗುವವರೆಗೆ ಕಾಯಬೇಕು ಎಂಬ ಉತ್ತರ ನೀಡುತ್ತಾರೆ. ನೀರು ಇಲ್ಲದೆ ದಿನನಿತ್ಯದ ಚುಟವಟಿಕೆಗಳಿಗೆ ಸಾಕಷ್ಟು ತೊಂದರೆಯಾಗಿದೆ. ಎಂಟು ದಿನಕ್ಕೆ ಪೂರೈಸುತ್ತಿದ್ದ ಕುಡಿಯುವ ನೀರು ಸಹ ಬಂದ್ ಮಾಡಲಾಗಿದೆ ಎಂದು ನಿವಾಸಿ ಅಬ್ದುಲ್ ತಿಳಿಸಿದರು.