ಪುಣೆ: ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ 17 ಮಂದಿಯನ್ನು ಬಲಿ ತೆಗೆದುಕೊಂಡ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಘಟನೆ ನಡೆದು ಭಾನುವಾರ ಒಂದು ವರ್ಷ ಪೂರೈಸಲಿದ್ದು, ಇದುವರೆಗೆ ಮುಚ್ಚಿಹೋಗಿದ್ದ ಬೇಕರಿ ಹೊಸ ವಿನ್ಯಾಸಗಳೊಂದಿಗೆ ಪುನರಾರಂಭಕ್ಕೆ ಸಿದ್ಧಗೊಳ್ಳುತ್ತಿದೆ. ‘ಘಟನೆ ನಂತರ ಬಾಗಿಲು ಹಾಕಿದ್ದ ಈ ಬೇಕರಿಯನ್ನು ಈ ಭಾನುವಾರವೇ ಪುನರಾರಂಭಿಸಬೇಕೆಂದು ಉದ್ದೇಶಿಸಿದ್ದವು. ಆದರೆ ನವೀಕರಣ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಬೇಕರಿ ಮತ್ತೆ ತೆರೆಯಲಿದೆ’ ಎಂದು ಬೇಕರಿಯ ಮಾಲೀಕ ಕುಟುಂಬದ ಹಿರಿಯ ಮಗಳು ಸ್ನೇಹಾಲ್ ಖಾರೋಸ್ ‘ಪ್ರಜಾವಾಣಿ’ಗೆ ತಿಳಿಸಿದರು.ಕುಟುಂಬಕ್ಕೆ ಏಕಮಾತ್ರ ಆದಾಯದ ಮೂಲವಾಗಿದ್ದ ಬೇಕರಿಯನ್ನು ಪುನಃ ನಿರ್ಮಿಸುವ ಉದ್ದೇಶಕ್ಕೆ ರಾಜ್ಯ ಸರ್ಕಾರ 14.5 ಲಕ್ಷ ರೂಪಾಯಿ ಪರಿಹಾರದ ಹಣ ನೀಡಿದ ನಂತರ ಚಾಲನೆ ದೊರೆಯಿತು.
ಮಾಲೀಕತ್ವದ ವಿವಾದ: ಬೇಕರಿ ಪುನರಾರಂಭಕ್ಕೆ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ಅದರ ಮಾಲೀಕತ್ವದ ಬಗ್ಗೆ ಹೊಸ ವಿವಾದ ಆರಂಭವಾಗಿದೆ. ‘ಜರ್ಮನ್ ಬೇಕರಿ ನನ್ನ ಕೂಸಾಗಿದ್ದು, 22 ವರ್ಷ ಅದನ್ನು ಪಾಲನೆ ಮಾಡಿದ್ದೇನೆ. ಈಗ ಅದರ ಮಾಲೀಕರಿಂದ ಹೊರದಬ್ಬಲ್ಪಟ್ಟಿದ್ದೇನೆ. ಇಲ್ಲಿ ನಾನು ಕೇವಲ ಸೇವಕ ಮಾತ್ರ ಆಗಿದ್ದೆ. ನನಗೆ ನ್ಯಾಯಬೇಕು’ ಎಂದು 1988ರಿಂದಲೂ ಬೇಕರಿಯನ್ನು ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಗೋಪಾಲ್ ಕಾರ್ಕೀ ಹೇಳಿದ್ದಾರೆ.