ಮಲೇಬೆನ್ನೂರು: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಯಾಯ್ತಿ ದರದಲ್ಲಿ ಬೀಜ ವಿತರಣೆ ಮಾಡುವ ಕಾರ್ಯಕ್ಕೆ ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಶುಕ್ರವಾರ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ಕೃಷಿ ಇಲಾಖೆ ರೈತರ ಅನುಕೂಲಕ್ಕಾಗಿ ಮುಂಚಿತವಾಗಿ ಬೀಜ ವಿತರಣೆ ಆರಂಭ ಮಾಡಿರುವುದು ಉತ್ತಮ ಸಂಪ್ರದಾಯ. ಸಣ್ಣ ಹಾಗೂ ಅತಿಸಣ್ಣ ರೈತರು ಪ್ರಯೋಜನ ಪಡೆಯುವಂತೆ ಕೋರಿದರು. ಪ್ರತಿ ಎಕರೆಗೆ 1 ಕೆಜಿ ಬೀಜ ಸಾಕಾಗುವುದಿಲ್ಲ, 1.5 ಕೆಜಿ ಬೀಜ ನೀಡಿ ಎಂದರು.
ರಿಯಾಯ್ತಿ ಬೀಜ ಪಡೆದು ಕಾಳಸಂತೆಯಲ್ಲಿ ಮಾರಬೇಡಿ ಎಂದು ರೈತರಲ್ಲಿ ಮಲೇಬೆನ್ನೂರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮನವಿ ಮಾಡಿದರು.
ತಾ.ಪಂ. ಸದಸ್ಯ ವಕೀಲ ಐರಣಿ ಅಣ್ಣೇಶ್, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಸುನಿತಾ ಮಾತನಾಡಿ, ಬೀಜ ಪಡೆಯಲು ರೈತರು ಅಧಿಕಾರಿಗಳ ಜತೆ ಸಮಾಧಾನದೊಂದಿಗೆ ಸಹಕರಿಸಿ ಜಗಳ ಗಲಾಟೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಮೆಕ್ಕೆಜೋಳ, ಊಟದ ಜೋಳ, ಅಲಸಂದೆ, ಹೆಸರು ಹಾಗೂ ತೊಗರಿಕಾಳಿನ ಬೀಜ ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷ ನಿಟ್ಟೂರು ಹೊನ್ನಪ್ಪ, ಸದಸ್ಯರಾದ ಕೆ.ಜಿ. ಮಂಜುನಾಥ್, ಯೂನುಸ್, ಜಯಪ್ಪ, ಬಿ. ಮಹೇಶ್, ವೈ. ರಂಗನಾಥ್ ಮತ್ತು ಕೃಷಿ ಅಧಿಕಾರಿಗಳು, ಸಹಾಯಕರು ಹಾಜರಿದ್ದರು. ಕೃಷಿ ಅಧಿಕಾರಿ ಹಾಲಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಯೋಜನೆಯ ಮಾಹಿತಿ ನೀಡಿದರು.