ಚಿತ್ರದುರ್ಗ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಪಡೆದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಶಾಸಕ ಹಾಗೂ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಜಿ. ಸೋಮಶೇಖರರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
`ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಷ್ಟರಮಟ್ಟಿಗೆ ಕಾರಣವೋ, ಅಷ್ಟೇ ಪ್ರಮಾಣದಲ್ಲಿ ನಮ್ಮ ಸಹೋದರು ಹಾಗೂ ಶ್ರೀರಾಮಲು ಕಾರಣರಾಗಿದ್ದಾರೆ. ನಮ್ಮನ್ನು ಚೆನ್ನಾಗಿ ಉಪಯೋಗಿಸಿಕೊಂಡ ಬಿಜೆಪಿ ಈಗ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕುತಂತ್ರದ ಮೂಲಕ ನಮ್ಮನ್ನು ಜೈಲಿಗೆ ಕಳುಹಿಸಿತು. ಇದಕ್ಕೆ ಸಂಸತ್ ಸದಸ್ಯ ಅನಂತಕುಮಾರ್ ಅವರೇ ಕಾರಣರು' ಎಂದು ದೂರಿದರು.
`ನಮಗೆ ಹಣ ಮಾಡುವ ಉದ್ದೇಶವಿಲ್ಲ. ಸಮಾಜಸೇವೆ ಮಾಡಬೇಕು ಎನ್ನುವ ದೃಷ್ಟಿಯಿಂದ ರಾಜಕೀಯಕ್ಕೆ ಬಂದೆವು. ಆದರೆ, ಇದೇ ಮುಂದಿನ ದಿನಗಳಲ್ಲಿ ನಮಗೆ ಮುಳ್ಳಾಗುತ್ತದೆ ಎಂದು ಗೊತ್ತಾಗಲಿಲ್ಲ. ಇಂದು ರಾಜಕೀಯ ಎಂದರೆ ಹಿಂಸೆಯಾಗುತ್ತಿದೆ' ಎಂದರು.