ದಾವಣಗೆರೆ: ಮಾರುಕಟ್ಟೆ ಅವ್ಯವಸ್ಥೆ, ರೋಗಬಾಧೆ, ಗುಣಮಟ್ಟ ಬಿತ್ತನೆ ಬೀಜಗಳ ಕೊರತೆ ಇತ್ಯಾದಿ ಸಮಸ್ಯೆಗಳಿಂದ ನಲುಗುತ್ತಿರುವ ಭಾರತದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಮುಂದೆ ಚಿನ್ನ ಸಿಕ್ಕರೂ ಜನರಿಗೆ ಅನ್ನ ಸಿಗದಂತಹ ದುಃಸ್ಥಿತಿ ಎದುರಾಗಲಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಅಭಿಪ್ರಾಯಪಟ್ಟರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಸಮುಚ್ಚಯ ಕಟ್ಟಡ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ರೈತರ ಸಂಖ್ಯೆ ಇಳಿಮುಖವಾಗಿದೆ. ಪರಿಣಾಮವಾಗಿ ಆಹಾರ ಉತ್ಪಾದನೆ ಕುಂಠಿತಗೊಂಡಿದೆ. ದೇಶದಲ್ಲಿ ಶೇ. 80ರಷ್ಟು ಇದ್ದ ರೈತ ವರ್ಗ ಈಗ ಕೇವಲ 50ರಷ್ಟು ಇದ್ದಾರೆ. ಈಚೆಗೆ ಎಲ್ಲಾ ದೇಶಗಳಲ್ಲೂ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ.
ಹಾಗಾಗಿ, ಜಾಗತಿಕಮಟ್ಟದಲ್ಲಿ ಕೃಷಿ ಉತ್ಪಾದನೆ ಕೂಡ ಕುಸಿಯುತ್ತಿದೆ. ಮುಂದೆ ಚಿನ್ನವನ್ನು ಆಮದು ಮಾಡಿಕೊಳ್ಳಬಹದು; ಆದರೆ, ಅನ್ನ ಸಿಗುತ್ತದೆ ಎಂಬ ಖಾತರಿಯಿಲ್ಲ ಎಂದರು.
ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ. ನಾರಾಯಣಗೌಡ ಮಾತನಾಡಿದರು. ಸಿರಿಗೆರೆಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.