ಪಿರಿಯಾಪಟ್ಟಣ: ಕೇಂದ್ರ ಸರ್ಕಾರದ ಭ್ರಷ್ಟ ಆಡಳಿತ, ದಿನನಿತ್ಯ ವಸ್ತುಗಳ ಬೆಲೆ ಏರಿಕೆ, ಗಡಿ ವಿವಾದ ಸಮಸ್ಯೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ತಿಳಿಸಿದರು.
ತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಶಕ್ತಿಕೇಂದ್ರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಕಿತ್ತಾಟ, ಒಳಜಗಳದಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಾಯಿತು. ನಮ್ಮ ಒಡಕನ್ನು ಸರಿಮಾಡಿಕೊಂಡರೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸೆ. 26 ರಂದು ನರೇಂದ್ರಮೋದಿ ರಾಜ್ಯಕ್ಕೆ ಬರುತ್ತಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನರೇಂದ್ರ ಮೋದಿಗೆ ಬೆಂಬಲ ಸೂಚಿಸಲಿದ್ದಾರೆ. ಬಿಜೆಪಿಗೆ ಕೆಟ್ಟ ಕಾಲ ದೂರವಾಗಿದ್ದು ಒಳ್ಳೆಯ ಕಾಲ ಬಂದಿದೆ ಎಂದರು.
ನರೇಂದ್ರಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುವುದರಿಂದ ಹಿಂದುಳಿದ ವರ್ಗಗಳು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿವೆ ಎಂದರು. ಮೋದಿ ನಾಯಕತ್ವವನ್ನು ಮೆಚ್ಚಿ ಎಲ್ಲಾ ಪಕ್ಷದ ಯುವಕರು ಈ ಬಾರಿ ಬಿಜೆಪಿಯ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಆರ್.ಟಿ. ಸತೀಶ್, ಮುಖಂಡರಾದ ಜಿ.ಸಿ. ವಿಕ್ರಂರಾಜ್, ಬೆಮ್ಮತ್ತಿಕೃಷ್ಣ, ಲೋಕಪಾಲಯ್ಯ, ರಾಜೇಗೌಡ, ಮಾಗಳಿರವಿ, ಮಹದೇವ್, ರಾಜಣ್ಣ, ಸಿ.ಕೆ. ಪ್ರಸನ್ನಕೇಶವ, ಎಸ್.ಟಿ. ಕೃಷ್ಣಪ್ರಸಾದ್, ವಿವಿಧ ಶಕ್ತಿಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.