ಲಕ್ಷ್ಮೇಶ್ವರ: ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಇಲ್ಲಿಗೆ ಸಮೀಪದ ಗೊಜನೂರು ಗ್ರಾಮದ ರಾಜೇಸಾಬ್ ತಾನೇಸಾಬ್ ಆನಿ ಅವರು ಜನವರಿ 24 ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತರಾಗಿದ್ದಾರೆ ಎಂಬ ಮಾಹಿತಿ ತಾಲ್ಲೂಕು ಆಡಳಿತದ ಕಚೇರಿಗೆ ಬಂದಿದೆ.
ಘಟನೆಯಲ್ಲಿ ಅವರು ಕಾಣೆಯಾಗಿದ್ದರು. ಭಾನುವಾರ ಶವ ದೊರೆತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಹಶೀಲ್ದಾರ ಆರ್.ಡಿ.ಉಪ್ಪಿನ `ಪ್ರಜಾವಾಣಿ~ಗೆ ತಿಳಿಸಿದರು.
ಪಾರ್ಥಿವ ಶರೀರವನ್ನು ಬೆಂಗಳೂರು ಮೂಲಕ ಆನಿ ಅವರ ಹುಟ್ಟೂರಿಗೆ ಮಂಗಳವಾರ ತರಲಾಗುವುದು. ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.