ಕುಷ್ಟಗಿ: ಪಟ್ಟಣದ ವ್ಯಾಪ್ತಿಯಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಮಧ್ಯೆಯೇ ಖಾಸಗಿ ಕೊಳವೆಬಾವಿಯೊಂದನ್ನು ಉಳಿಸಲು ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಗುಂಡಿಯಿಂದಾಗಿ ಅನೇಕ ವಾಹನ ಸವಾರರು ರಾತ್ರಿವೇಳೆ ಮುಗ್ಗರಿಸುತ್ತಿರುವ ಬಗ್ಗೆ ದೂರಲಾಗಿದೆ.
ಈ ಕೊಳವೆಬಾವಿ ಮೊದಲು ರಸ್ತೆ ಪಕ್ಕದಲ್ಲಿತ್ತು, ಚತುಷ್ಪಥವನ್ನಾಗಿ ವಿಸ್ತರಿಸುವಾಗ ಇಳಕಲ್ ಕಡೆಯಿಂದ ಬರುವ ಸರ್ವಿಸ್ ರಸ್ತೆ ಮಧ್ಯೆದಲ್ಲಿ ಬಂದರೂ ಅದನ್ನು ತೆರವುಗೊಳಿಸಲಿಲ್ಲ. ನಂತರ ರಸ್ತೆ ಮಧ್ಯೆ ಕೊಳವೆಬಾವಿ ಸುತ್ತಲೂ ಚೌಕಾಕಾರದ ಗುಂಡಿ ನಿರ್ಮಿಸಿ ಅದರ ಮೇಲೆ ಕಾಂಕ್ರೀಟ್ ಮುಚ್ಚಳ (ಸ್ಲ್ಯಾಬ್) ಅಳವಡಿಸಲಾಗಿದೆ.
ಆದರೆ ರಾತ್ರಿ ವೇಳೆ ಗುಂಡಿ ದಿಢಿ ೀರ್ ಪ್ರತ್ಯಕ್ಷವಾದರೂ ನಿಯಂತ್ರಿಸಲು ಸಾಧ್ಯವಾಗದೇ ವಾಹನಗಳು ಡಿಕ್ಕಿ ಹೊಡೆದು ಸವಾರರು ಉರುಳಿ ಬಿದ್ದು ಗಾಯಮಾಡಿಕೊಳ್ಳವುದು ಸಾಮಾನ್ಯ ಸಂಗತಿಯಾಗಿದೆ.
ಸದರಿ ಕೊಳವೆಬಾವಿ ಪಟ್ಟಣದ ಅಶೋಕ ಬಳೂಟಗಿ ಎಂಬುವರರಿಗೆ ಸೇರಿದೆ, ಸಬ್ಮರ್ಸಿಬಲ್ ಮೋಟರ್ ದುರಸ್ತಿಗೆ ಬಂದಾಗ ಎತ್ತಿ ಇಳಿಸುವುದಕ್ಕೆ ಅನುಕೂಲವಾಗಲಿ ಎಂಬಕಾರಣಕ್ಕೆ ರಸ್ತೆ ನಿರ್ಮಾಣದ ಸಂದರ್ಭದಲ್ಲೇ ಓರಿಯಂಟಲ್ ನಿರ್ಮಾಣ ಕಂಪೆನಿ ಅದರ ಸುತ್ತ ಗುಂಡಿ ನಿರ್ಮಿಸಿ, ತಳದಲ್ಲಿ ಕೊಳವೆಗಳನ್ನು ಜೋಡಿಸಿಕೊಟ್ಟಿರುವುದಕ್ಕೆ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ಬಳಕೆಯ ಈ ಕೊಳವೆಬಾವಿಯ ನೀರಿನಿಂದ ಸಿಮೆಂಟ್ ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ.
ಅಲ್ಲದೇ ವಾಹನಗಳ ಡಿಕ್ಕಿಯಿಂದ ಕಾಂಕ್ರೀಟ್ ಸ್ಲ್ಯಾಬ್ ಒಡೆದು ಹೊಗಿರುವುದು, ವಾಹನಗಳ ಗಾಜು ಮತ್ತಿತರೆ ಬಿಡಿಭಾಗಗಲು ಒಡೆದು ಚೂರು ಚೂರಾಗಿ ಬಿದ್ದಿರುವುದು ಕಂಡುಬರುತ್ತಿವೆ. ಎಷ್ಟೊ ಜನ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದಾರೆ. ವಾಹನಗಳು ಸಹ ಹಾಳಾಗಿವೆ ಎಂದು ಅಲ್ಲಿನ ಜನ ಹೇಳಿದರು.
ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಮಧ್ಯೆ ಇಂಥ ಗುಂಡಿಗಳು ಎಲ್ಲಿಯೂ ಕಂಡಬರುವುದಿಲ್ಲ. ಆದರೆ ಇಲ್ಲಿ ಏನು ವಿಶೇಷ ಎಂಬುದೇ ಅರ್ಥವಾಗುತ್ತಿಲ್ಲ ಎಂದು ದ್ವಿಚಕ್ರ ವಾಹನ ಸವಾರರಾದ ಇಳಕಲ್ನ ಕುಮಾರೇಶ್ವರ ಹಿರೇಮಠ, ಪ್ರಭುಗೌಡ ಅಚ್ಚರಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.