ವಾಷಿಂಗ್ಟನ್ (ಪಿಟಿಐ): ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಬಂಧನ ನಂತರದ ಬೆಳವಣಿಗೆಗಳು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಯುಂಟು ಮಾಡಿದೆ ಎಂಬುದು ಅಮೆರಿಕದ ಉನ್ನತ ನಾಯಕತ್ವಕ್ಕೆ ಮನವರಿಕೆಯಾಗಿದೆ.
ಈ ರಾಜತಾಂತ್ರಿಕ ಬಿಕ್ಕಟ್ಟು ತಾನು ಮಾಡಿದ ‘ಮೂರ್ಖತನದ ಕೆಲಸ’ ಎಂಬುದನ್ನು ಅಮೆರಿಕದ ಉನ್ನತ ನಾಯಕತ್ವ ಹೇಳಿದೆ. ಹಳಿ ತಪ್ಪಿದ ರಾಜತಾಂತ್ರಿಕ ಸಂಬಂಧವನ್ನು ಮತ್ತೆ ಸರಿದಾರಿಗೆ ತರಲು ‘ಹೆಚ್ಚು ಶ್ರಮ’ ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಖೋಬ್ರಾಗಡೆ ನವದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಅಮೆರಿಕ ಸರ್ಕಾರದಲ್ಲಿ ನೆಮ್ಮದಿಯ ಭಾವ ಮನೆ ಮಾಡಿದೆ. ಭಾರತದೊಂದಿಗಿನ ಬಾಂಧವ್ಯವನ್ನು ಮುಂದುವರಿಸುವ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
‘ಭಾರತ ಹಾಗೂ ಅಮೆರಿಕ ವಿತ್ತೃತ ಮತ್ತು ಗಾಢ ಗೆಳೆತನ ಹೊಂದಿವೆ. ಈ ಅಪರೂಪದ ಘಟನೆಯು ನಾವು ಪರಸ್ಪರ ಗೌರವಯುತವಾಗಿ ಹಂಚಿಕೊಂಡಿರುವ ಬಾಂಧವ್ಯ ಅಂತ್ಯಗೊಳ್ಳುವ ಸೂಚಕವಲ್ಲ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಣ ರಾಜತಾಂತ್ರಿಕ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಸಾನ್ ರೈಸ್ ಅವರು ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜಾನ್ ಕೆರಿ ಅವರಿಗೂ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಡಿ. 12ರಂದು ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಮೆರಿಕದ ಉನ್ನತ ನಾಯಕರು ಕೋಪಗೊಂಡಿದ್ದರು ಎಂದು ನಂಬಲರ್ಹ ಮೂಲಗಳು ಹೇಳಿವೆ. ‘ಇದು ಮೂರ್ಖತನದ ಪರಮಾವಧಿ’ ಎಂದು ಉನ್ನತ ನಾಯಕರೊಬ್ಬರು ಆ ಸಂದರ್ಭದಲ್ಲಿ ಹೇಳಿದ್ದರು. ಜೊತೆಗೆ, ಘಟನೆಯಿಂದಾಗಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಕ್ಕೆ ಆಗುವ ಹಾನಿಯನ್ನೂ ಅವರು ಉಲ್ಲೇಖಿಸಿದ್ದರು. ಆ ನಾಯಕರ ‘ಆಕ್ರೋಶ ಭರಿತ’ ಪ್ರತಿಕ್ರಿಯೆ ಹೇಗಿತ್ತೆಂದರೆ, ಘಟನೆಗೆ ಸಂಬಂಧಿಸಿ ಭಾರತದಲ್ಲಿ ವ್ಯಕ್ತವಾದ ‘ಆಕ್ರೋಶ’ದಂತೆಯೇ ಇತ್ತು ಎಂದೂ ಮೂಲಗಳು ತಿಳಿಸಿವೆ.
ಆ ಕಾರಣಕ್ಕಾಗಿಯೇ ದೇವಯಾನಿ ಬಂಧನದ ನಂತರ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ವಿದೇಶ ಪ್ರವಾಸದ ಮಧ್ಯದಲ್ಲೇ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಅವರ ಸಂಪರ್ಕ ಸಾಧ್ಯವಾಗದಿದ್ದುದರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರೊಂದಿಗೆ ಮಾತನಾಡಿದ್ದರು. ದೂರವಾಣಿ ಮಾತುಕತೆಯ ಸಂದರ್ಭದಲ್ಲಿ ಕೆರಿ ಅವರು ನಡೆದಿರುವ ಘಟನೆಗೆ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ, ‘ಕೆರಿ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ವಿದೇಶಾಂಗ ಇಲಾಖೆ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿತ್ತು.
ಅಧಿಕಾರಿ ಉಚ್ಚಾಟನೆಗೆ ಅಮೆರಿಕ ವಿಷಾದ
ದೇವಯಾನಿ ಖೋಬ್ರಾಗಡೆ ಅವರನ್ನು ಸ್ವದೇಶಕ್ಕೆ ಕಳುಹಿಸಿದ್ದಕ್ಕೆ ಪ್ರತೀಕಾರವಾಗಿ ಭಾರತ ತನ್ನ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿರುವುದಕ್ಕೆ ಅಮೆರಿಕ ತೀವ್ರ ವಿಷಾದ ವ್ಯಕ್ತಪಡಿಸಿದೆ.
‘ನಮ್ಮ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸುವುದು ಅನಿವಾರ್ಯ ಎಂದು ಭಾರತ ಭಾವಿಸಿದ್ದಕ್ಕೆ ನಮಗೆ ತೀವ್ರ ವ್ಯಥೆಯಾಗುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಜೆನ್ ಸಾಕಿ ಹೇಳಿದ್ದಾರೆ. ಭಾರತ ಸರ್ಕಾರದ ಸೂಚನೆ ಮೇರೆಗೆ ನವದೆಹಲಿಯಲ್ಲಿರುವ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಸ್ವದೇಶಕ್ಕೆ ಹಿಂತಿರುಗುತ್ತಿರುವುದನ್ನು ಅವರು ದೃಢಪಡಿಸಿದ್ದಾರೆ. ‘ಭಾರತ – ಅಮೆರಿಕದ ದ್ವಿಪಕ್ಷೀಯ ಸಂಬಂಧಕ್ಕೆ ಇದು ಸವಾಲಿನ ಕಾಲ. ಈ ಬಾಂಧವ್ಯಕ್ಕೆ ಕೊನೆ ಹಾಡದೆ, ಅದನ್ನು ವೃದ್ಧಿಸುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಭಾರತ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಅಮೆರಿಕಕ್ಕೆ ಇದೆ’ ಎಂದರು.
ಎಲ್ಲ ಮೊಕದ್ದಮೆ ರದ್ದತಿಗೆ ಭಾರತ ಆಗ್ರಹ
ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಯಾನಿ ವಿರುದ್ಧ ಸಣ್ಣ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎನ್ನುವ ಅಮೆರಿಕದ ಪ್ರಸ್ತಾವವನ್ನು ಭಾರತ ತಿರಸ್ಕರಿಸಿದೆ.
ದೇವಯಾನಿ ಮೇಲಿನ ಎಲ್ಲ ಆರೋಪಗಳನ್ನು ಕೈಬಿಡಬೇಕೆಂದು ಭಾರತ ಒತ್ತಿ ಹೇಳಿದೆ ಎಂದು ಮೂಲಗಳು ತಿಳಿಸಿವೆ. ‘ದೇವಯಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕೆ ಹಿಂದೆ ಸರಿಯಲು ಮನಸ್ಸು ಮಾಡದಿರುವುದು ಒಂದೆಡೆಯಾದರೆ, ಇದನ್ನು ಅಪರಾಧ ಪ್ರಕರಣವೆಂದು ಪರಿಗಣಿಸಲು ಭಾರತ ಒಪ್ಪುತ್ತಿಲ್ಲ’ ಎಂದು ಮೂಲಗಳು ಹೇಳಿವೆ.
ಸಂಗೀತಾಗೆ ಬೆಂಬಲ: ಈ ಮಧ್ಯೆ, ದಕ್ಷಿಣ ಏಷ್ಯಾ ಹಕ್ಕುಗಳ ಒಕ್ಕೂಟ ಭಾರತದ ರಾಜತಾಂತ್ರಿಕ ಅಧಿಕಾರಿ ಮನೆಯಲ್ಲಿ ತೊಂದರೆ ಅನುಭವಿಸಿದ ಕೆಲಸದಾಕೆ ಸಂಗೀತಾ ರಿಚರ್ಡ್ ನೆರವಿಗೆ ಬಂದಿದೆ. ‘ನಾವು ಸಂಗೀತಾ ಪರವಾಗಿ ನಿಲ್ಲುತ್ತೇವೆ ಮತ್ತು ಅವರನ್ನು ಬೆಂಬಲಿಸುವಂತೆ ತನ್ನ ಎಲ್ಲ ಸದಸ್ಯರಲ್ಲಿ ಮನವಿ ಮಾಡುತ್ತೇವೆ’ ಎಂದು ಒಕ್ಕೂಟ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.