ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕ ಬಿಕ್ಕಟ್ಟು ‘ಮೂರ್ಖತನದ ಪರಮಾವಧಿ’

ಖೋಬ್ರಾಗಡೆ ಬಂಧನ ಪ್ರಕರಣದಲ್ಲಿ ಅಮೆರಿಕ ಉನ್ನತ ನಾಯಕತ್ವದ ಅಭಿಮತ
Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾ­ಗಡೆ ಬಂಧನ ನಂತರದ  ಬೆಳವಣಿಗೆಗಳು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಯುಂಟು ಮಾಡಿದೆ ಎಂಬುದು ಅಮೆರಿಕದ ಉನ್ನತ ನಾಯಕತ್ವಕ್ಕೆ ಮನವರಿಕೆಯಾಗಿದೆ.

ಈ ರಾಜತಾಂತ್ರಿಕ ಬಿಕ್ಕಟ್ಟು ತಾನು ಮಾಡಿದ ‘ಮೂರ್ಖ­ತನದ  ಕೆಲಸ’ ಎಂಬುದನ್ನು ಅಮೆ­ರಿಕದ ಉನ್ನತ ನಾಯ­ಕತ್ವ ಹೇಳಿದೆ. ಹಳಿ ತಪ್ಪಿದ ರಾಜತಾಂತ್ರಿಕ ಸಂಬಂಧವನ್ನು ಮತ್ತೆ ಸರಿದಾರಿಗೆ ತರಲು ‘ಹೆಚ್ಚು ಶ್ರಮ’ ವಹಿಸ­ಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಖೋಬ್ರಾಗಡೆ ನವದೆಹಲಿಗೆ ಬಂದಿಳಿಯುತ್ತಿ­ದ್ದಂತೆಯೇ ಅಮೆರಿಕ ಸರ್ಕಾರ­ದಲ್ಲಿ ನೆಮ್ಮದಿಯ ಭಾವ ಮನೆ ಮಾಡಿದೆ. ಭಾರತ­­ದೊಂದಿ­ಗಿನ ಬಾಂಧವ್ಯವನ್ನು ಮುಂದುವ­ರಿ­ಸುವ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಭಾರತ ಹಾಗೂ ಅಮೆರಿಕ ವಿತ್ತೃತ ಮತ್ತು ಗಾಢ­ ಗೆಳೆತನ ಹೊಂದಿವೆ. ಈ ಅಪರೂಪದ ಘಟನೆಯು ನಾವು ಪರಸ್ಪರ ಗೌರವಯುತ­ವಾಗಿ ಹಂಚಿ­ಕೊಂಡಿರುವ ಬಾಂಧವ್ಯ ಅಂತ್ಯಗೊಳ್ಳುವ ಸೂಚಕವಲ್ಲ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಹೇಳಿದ್ದಾರೆ.

ಭಾರತ  ಮತ್ತು ಅಮೆರಿಕ ನಡುವಣ ರಾಜತಾಂತ್ರಿಕ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ  ನಿರಂತರವಾಗಿ ಮಾಹಿತಿ ನೀಡಲಾಗು­ತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಸಾನ್‌ ರೈಸ್‌ ಅವರು ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜಾನ್‌ ಕೆರಿ ಅವರಿಗೂ ಎಲ್ಲಾ ಬೆಳವಣಿಗೆ­ಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಡಿ. 12ರಂದು ದೇವಯಾನಿ ಖೋಬ್ರಾಗಡೆ ಅವ­ರನ್ನು ಬಂಧಿಸಿದ ಸುದ್ದಿ ಹೊರಬೀಳು­ತ್ತಿ­ದ್ದಂತೆಯೇ ಅಮೆರಿ­ಕದ ಉನ್ನತ ನಾಯಕರು ಕೋಪ­ಗೊಂಡಿ­ದ್ದರು ಎಂದು ನಂಬಲರ್ಹ ಮೂಲ­ಗಳು ಹೇಳಿವೆ. ‘ಇದು ಮೂರ್ಖತನದ ಪರಮಾ­ವಧಿ’ ಎಂದು ಉನ್ನತ ನಾಯಕರೊಬ್ಬರು ಆ ಸಂದರ್ಭದಲ್ಲಿ ಹೇಳಿದ್ದರು. ಜೊತೆಗೆ, ಘಟನೆ­ಯಿಂದಾಗಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಕ್ಕೆ ಆಗುವ ಹಾನಿ­ಯನ್ನೂ ಅವರು ಉಲ್ಲೇಖಿಸಿದ್ದರು. ಆ ನಾಯಕರ ‘ಆಕ್ರೋಶ ಭರಿತ’ ಪ್ರತಿ­ಕ್ರಿಯೆ ಹೇಗಿತ್ತೆಂದರೆ, ಘಟನೆಗೆ ಸಂಬಂ­ಧಿ­ಸಿ ಭಾರತದಲ್ಲಿ ವ್ಯಕ್ತವಾದ ‘ಆಕ್ರೋಶ’­­ದಂತೆಯೇ ಇತ್ತು ಎಂದೂ ಮೂಲಗಳು ತಿಳಿಸಿವೆ.

ಆ ಕಾರಣಕ್ಕಾಗಿಯೇ ದೇವಯಾನಿ ಬಂಧನದ ನಂತರ ವಿದೇಶಾಂಗ ಕಾರ್ಯ­ದರ್ಶಿ ಜಾನ್‌ ಕೆರಿ ಅವರು ವಿದೇಶ ಪ್ರವಾ­ಸದ ಮಧ್ಯದಲ್ಲೇ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಅವರ ಸಂಪರ್ಕ ಸಾಧ್ಯವಾಗ­ದಿದ್ದು­ದ­ರಿಂದ  ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಅವರೊಂದಿಗೆ ಮಾತನಾಡಿದ್ದರು. ದೂರ­ವಾಣಿ ಮಾತು­ಕತೆಯ ಸಂದರ್ಭದಲ್ಲಿ ಕೆರಿ ಅವರು ನಡೆ­ದಿರುವ ಘಟನೆಗೆ ಕ್ಷಮೆಯಾ­ಚಿಸಿದ್ದರು ಎನ್ನ­ಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ, ‘ಕೆರಿ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ವಿದೇಶಾಂಗ ಇಲಾಖೆ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿತ್ತು.

ಅಧಿಕಾರಿ ಉಚ್ಚಾಟನೆಗೆ ಅಮೆರಿಕ ವಿಷಾದ
ದೇವಯಾನಿ ಖೋಬ್ರಾಗಡೆ ಅವರನ್ನು ಸ್ವದೇ­ಶಕ್ಕೆ ಕಳುಹಿಸಿದ್ದಕ್ಕೆ ಪ್ರತೀಕಾರವಾಗಿ ಭಾರತ ತನ್ನ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿ­ರು­ವುದಕ್ಕೆ ಅಮೆರಿಕ ತೀವ್ರ ವಿಷಾದ ವ್ಯಕ್ತಪಡಿಸಿದೆ.

‘ನಮ್ಮ ರಾಜತಾಂತ್ರಿಕ ಅಧಿಕಾರಿ­ಯನ್ನು ಉಚ್ಚಾಟಿಸುವುದು ಅನಿ­ವಾರ್ಯ ಎಂದು ಭಾರತ ಭಾವಿಸಿದ್ದಕ್ಕೆ ನಮಗೆ ತೀವ್ರ ವ್ಯಥೆ­ಯಾಗುತ್ತಿದೆ’ ಎಂದು ಅಮೆರಿಕ ವಿದೇ­ಶಾಂಗ ಇಲಾಖೆ ವಕ್ತಾರ ಜೆನ್‌ ಸಾಕಿ ಹೇಳಿದ್ದಾರೆ. ಭಾರತ ಸರ್ಕಾರದ ಸೂಚನೆ ಮೇರೆಗೆ  ನವ­ದೆಹಲಿಯಲ್ಲಿರುವ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿ­­­­ರುವ ಅಧಿಕಾರಿಯೊ­ಬ್ಬರು ಸ್ವದೇಶಕ್ಕೆ ಹಿಂತಿರುಗುತ್ತಿರುವುದನ್ನು ಅವರು ದೃಢಪಡಿಸಿದ್ದಾರೆ. ‘ಭಾರತ – ಅಮೆರಿಕದ ದ್ವಿಪಕ್ಷೀಯ ಸಂಬಂಧಕ್ಕೆ ಇದು ಸವಾಲಿನ ಕಾಲ. ಈ ಬಾಂಧವ್ಯಕ್ಕೆ  ಕೊನೆ ಹಾಡದೆ, ಅದನ್ನು ವೃದ್ಧಿಸುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮ­ಗಳನ್ನು ಭಾರತ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಅಮೆರಿಕಕ್ಕೆ ಇದೆ’ ಎಂದರು.

ಎಲ್ಲ ಮೊಕದ್ದಮೆ ರದ್ದತಿಗೆ ಭಾರತ ಆಗ್ರಹ
ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ದೇವ­ಯಾನಿ ವಿರುದ್ಧ ಸಣ್ಣ ಕ್ರಿಮಿನಲ್‌ ಪ್ರಕರಣ ದಾಖ­ಲಿ­ಸುತ್ತೇವೆ ಎನ್ನುವ ಅಮೆರಿಕದ ಪ್ರಸ್ತಾವ­ವನ್ನು ಭಾರತ ತಿರಸ್ಕರಿಸಿದೆ.

ದೇವಯಾನಿ ಮೇಲಿನ ಎಲ್ಲ ಆರೋಪ­­ಗ­ಳನ್ನು ಕೈಬಿಡಬೇಕೆಂದು ಭಾರತ ಒತ್ತಿ ಹೇಳಿದೆ ಎಂದು ಮೂಲ­ಗಳು ತಿಳಿಸಿವೆ. ‘ದೇವಯಾನಿ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಅಮೆರಿಕೆ ಹಿಂದೆ ಸರಿಯಲು ಮನಸ್ಸು ಮಾಡದಿರುವುದು ಒಂದೆ­ಡೆ­­ಯಾದರೆ, ಇದನ್ನು ಅಪರಾಧ ಪ್ರಕರಣ­ವೆಂದು ಪರಿಗಣಿಸಲು ಭಾರತ ಒಪ್ಪು­ತ್ತಿಲ್ಲ’ ಎಂದು ಮೂಲಗಳು ಹೇಳಿವೆ.

ಸಂಗೀತಾಗೆ ಬೆಂಬಲ:  ಈ ಮಧ್ಯೆ, ದಕ್ಷಿಣ ಏಷ್ಯಾ ಹಕ್ಕುಗಳ ಒಕ್ಕೂಟ ಭಾರತದ ರಾಜ­ತಾಂತ್ರಿಕ ಅಧಿ­ಕಾರಿ ಮನೆ­ಯಲ್ಲಿ ತೊಂದರೆ ಅನುಭವಿ­ಸಿದ ಕೆಲಸ­­ದಾಕೆ ಸಂಗೀತಾ ರಿಚರ್ಡ್‌ ನೆರವಿಗೆ ಬಂದಿದೆ.  ‘ನಾವು ಸಂಗೀತಾ ಪರವಾಗಿ ನಿಲ್ಲು­ತ್ತೇವೆ ಮತ್ತು ಅವರನ್ನು ಬೆಂಬ­ಲಿ­ಸುವಂತೆ ತನ್ನ ಎಲ್ಲ ಸದಸ್ಯರಲ್ಲಿ ಮನವಿ ಮಾಡು­ತ್ತೇವೆ’ ಎಂದು ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT