ಮಂಡ್ಯ: ಇವರ ಹೆಸರು ಎಂ.ಕೆ.ಸಚ್ಚಿದಾನಂದ. ಅಮೆರಿಕಾದಲ್ಲಿ ಪ್ರತಿ ತಿಂಗಳು 1.8 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು. ಐದು ತಿಂಗಳ ಹಿಂದೆ ತವರೂರು ಮಂಡ್ಯಕ್ಕೆ ಹಿಂದಿರುಗಿದರು. ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚುವಂತೆ ಜನಪ್ರತಿನಿಧಿಗಳು, ಪುರಸಭೆ ಆಯುಕ್ತರಿಗೆ ದೂರು ನೀಡಿದರು. ತಿಂಗಳುಗಳು ಕಳೆದರೂ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚಲೇ ಇಲ್ಲ. ಇದರಿಂದ ಬೇಸರಗೊಂಡ ಸಚ್ಚಿದಾನಂದ ಹದಗೆಟ್ಟ ರಸ್ತೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಆಶಯದೊಂದಿಗೆ ನಗರಸಭೆ ಚುನಾವಣೆ ಕಣಕ್ಕೆ ಇಳಿದಿದ್ದಾರೆ.
ನಗರದ ತಾವರಗೆರೆ ಬಡಾವಣೆಯವರಾದ ಇವರು 27ನೇ ವಾರ್ಡ್ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. 1977ರಲ್ಲಿ ಮಂಡ್ಯದಲ್ಲಿ ಜನಿಸಿದ ಸಚ್ಚಿದಾನಂದ 2000 ದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಬಯೋ ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿ, ನಂತರ ಡಾಕ್ಟರೇಟ್ ಪದವಿ ಪಡೆದರು.
ಅಮೆರಿಕಾದ ಲೂಸಿಯಾನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ 2006 ರಿಂದ 2012 ರ ವರೆಗೆ ಸಂಶೋಧಕರಾಗಿ ಕೆಲಸ ನಿರ್ವಹಿಸಿದರು. ಇವರು ತಮ್ಮ ಮಗನನ್ನು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಶಾಲೆಗೆ ಸೇರಿಸುವ ಉದ್ದೇಶದಿಂದ ಪತ್ನಿಯೊಂದಿಗೆ ಮಂಡ್ಯಕ್ಕೆ ಹಿಂದಿರುಗಿದ್ದರು.
`ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಿರುವ ರಸ್ತೆಯೊಂದರಲ್ಲಿ ಗುಂಡಿ ಬಿದ್ದಿತ್ತು. ಅದನ್ನು ಕಂಡು ದುರಸ್ತಿ ಮಾಡಿಸಿ ಎಂದು ಆ ವಾರ್ಡಿನ ಸದಸ್ಯ, ಮುಖಂಡರು, ಶಾಸಕ ಹಾಗೂ ನಗರಸಭೆ ಆಯುಕ್ತರಿಗೂ ದೂರು ನೀಡಿದೆ. ದುರಸ್ತಿ ಮಾತ್ರ ಕಾಣಲಿಲ್ಲ. ಈ ಅವ್ಯವಸ್ಥೆಯಲ್ಲಿ ಶೇ 5 ರಷ್ಟಾದರೂ ಬದಲಾವಣೆ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆ ಕಣಕ್ಕೆ ಇಳಿದಿದ್ದೇನೆ' ಎನ್ನುತ್ತಾರೆ ಸಚ್ಚಿದಾನಂದ.
ಲೂಸಿಯಾನಾದ ಗವರ್ನರ್ ಬಾಬಿ ಜಿಂದಾಲ್ ಹಾಗೂ ಮಂಡ್ಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಡಾ.ಶಂಕರೇಗೌಡ ಅವರು ನಾನು ಚುನಾವಣೆಗೆ ಸ್ಪರ್ಧಿಸಲು ಪ್ರೇರಣೆಯಾಗಿದ್ದಾರೆ ಎಂದು ಹೇಳುತ್ತಾರೆ.
`ಚುನಾವಣಾ ಕಣಕ್ಕೆ ಇಳಿಯುವುದನ್ನು ನಿವೃತ್ತ ಶಿಕ್ಷಕರಾದ ತಂದೆ ಕೆಂಚೇಗೌಡ ತೀವ್ರವಾಗಿ ವಿರೋಧಿಸಿದರು. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ಪರ್ಧಿಸುವುದು ಬೇಡ ಎನ್ನುವುದು ಅವರ ನಿಲುವುವಾಗಿತ್ತು. ಎಲ್ಲರೂ ವೈಯಕ್ತಿಕ ಜೀವನವನ್ನು ನೋಡಿಕೊಂಡರೆ ಹೇಗೆ? ವಿರೋಧದ ನಡುವೆಯೂ ಬದಲಾವಣೆಗಾಗಿ ಸ್ಪರ್ಧೆ ಮಾಡುತ್ತಿದ್ದೇನೆ' ಎನ್ನುತ್ತಾರೆ ಸಚ್ಚಿದಾನಂದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.