ರಾಯಚೂರು: ಆ ವಿಶಾಲ ಆವರಣದ ಎಲ್ಲೆಡೆ ಬೆಳಿಗ್ಗೆಯಿಂದಲೇ ಮಕ್ಕಳ ಕಲರವ... ಈ ದೇಶ, ಈ ನಾಡಿನ ಬಗ್ಗೆ ತಮಗೆ ತಿಳಿದಷ್ಟನ್ನು ತೊದಲು ನುಡಿಯಲ್ಲಿ ಅಚ್ಚುಕಟ್ಟಾಗಿ ಭಾಷಣ ಮಾಡಿ ಖುಷಿ ಪಟ್ಟರು...
ಮತ್ತೊಂದಿಷ್ಟು ಮಕ್ಕಳು ತ್ರಿವರ್ಣ ಧ್ವಜ, ಸ್ವಾತಂತ್ರ್ಯ ಹೋರಾಟಗಾರರ ಚಿತ್ತಾರಗಳನ್ನು ಹಲವು ವರ್ಣಗಳಲ್ಲಿ ಬಿಡಿಸಿ ಸಂಭ್ರಮಿಸಿದರು...
ಇನ್ನೂ ಕೆಲ ಮಕ್ಕಳು ಕೈಕಾಲು ಕುಣಿಸುತ್ತ ಈ ದೇಶದ ಹಿರಿಮೆ ಗರಿಮೆ ಸಾರುವ ದೇಶಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು. ಇವು ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬುಧವಾರ ಕಂಡು ಬಂದ ದೃಶ್ಯಗಳು. ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಚಿತ್ರಕಲೆ, ದೇಶ ಭಕ್ತಿಗೀತೆ, ಪ್ರಬಂಧ, ಭಾಷಣ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಿತ್ತು.
1ರಿಂದ 4ನೇ ತರಗತಿಯವರೆಗಿನ ಮಕ್ಕಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ 175 ಮಕ್ಕಳು, 5ರಿಂದ 7ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 45 ಮಕ್ಕಳು, ಭಾಷಣ ಸ್ಪರ್ಧೆಯಲ್ಲಿ 25, ದೇಶಭಕ್ತಿ ವಿಭಾಗದಲ್ಲಿ 35 ಮಕ್ಕಳು, ರಂಗೋಲಿ ವಿಭಾಗದಲ್ಲಿ 25 ಮಕ್ಕಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
8ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಈ ಸ್ಪರ್ಧೆ ರಂಗಮಂದಿರದಲ್ಲಿ ಗುರುವಾರ ನಡೆಯಲಿದೆ. 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರಾದ ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಪರ್ಧಾ ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಎಚ್ ಮ್ಯಾದಾರ್ `ಪ್ರಜಾವಾಣಿ~ಗೆ ತಿಳಿಸಿದರು.