ಬೆಂಗಳೂರು: `ಫೆಬ್ರುವರಿ 1 ರಿಂದ 3 ರ ವರೆಗೆ ನಗರದಲ್ಲಿ ನಡೆಯಲಿರುವ ವಿಶ್ವ ನೀರಿನ ಅಧಿವೇಶನವನ್ನು ಸರ್ಕಾರ ಈ ಕೂಡಲೇ ನಿಷೇಧಿಸಬೇಕು~ ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಅಧಿವೇಶನದ ಉದ್ದೇಶ ನೀರನ್ನು ಖಾಸಗಿ ಕಂಪೆನಿಗಳಿಗೆ ಒಪ್ಪಿಸುವುದಾಗಿದೆ. ನಿವೃತ್ತ ಐಎಎಸ್ ಅಧಿಕಾರಿಯಾದ ಡಾ. ಎ. ರವೀಂದ್ರ ಮತ್ತು ಅವರ ನೇತೃತ್ವದ ಎನ್ಜಿಓ ಕೇಂದ್ರದಿಂದ ಸರ್ಕಾರದ ಸಹಭಾಗಿತ್ವದೊಂದಿಗೆ ಈ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಿಂದ ನೀರಿನ ಸ್ವಾಮ್ಯವೆಲ್ಲ ಖಾಸಗಿ ಕಂಪೆನಿಗಳ ಪಾಲಾಗಲಿದೆ. ಅವರು ವೈಯಕ್ತಿಕವಾಗಿ ಅಧಿವೇಶನ ಮಾಡಿಕೊಳ್ಳಲಿ ಇದಕ್ಕೆ ನಮ್ಮ ವಿರೋಧವಿಲ್ಲ~ ಎಂದರು.
`ಜಾಗತಿಕ ವ್ಯವಹಾರಗಳ ಹೆಸರಿನಲ್ಲಿ ಭೂಮಿಯನ್ನು ಪಡೆದದ್ದಾಯಿತು. ಈಗ ನೀರನ್ನು ಖಾಸಗಿಯವರಿಗೆ ಒಪ್ಪಿಸಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರ ಈ ಅಧಿವೇಶನದಲ್ಲಿ ಯಾವುದೇ ರೀತಿಯಲ್ಲೂ ಪಾಲ್ಗೊಳ್ಳಬಾರದು~ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
`ನಮ್ಮ ನೀರಿನ ಸಂಪೂರ್ಣ ಅಧಿಕಾರವನ್ನು ಖಾಸಗಿ ಕಂಪೆನಿಗಳಿಗೆ ನೀಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಥಾನ ಎಲ್ಲಿರುತ್ತದೆ. ಜನರ ಅಭಿಪ್ರಾಯಗಳಿಗೆ ಯಾವುದೇ ಮಾನ್ಯತೆಯಿಲ್ಲದೆ, ಖಾಸಗೀಕರಣವನ್ನು ಮುಕ್ತವಾಗಿ ಸ್ವಾಗತಿಸಲಾಗುತ್ತಿದೆ~ ಎಂದರು.
`ಸರ್ಕಾರ ಅಧಿವೇಶನದಲ್ಲಿ ಪಾಲ್ಗೊಂಡರೆ, ಫೆಬ್ರುವರಿ ಮೊದಲ ವಾರದಿಂದ ನೀರಿನ ಹಕ್ಕಿಗಾಗಿ ಜನಾಂದೋಲನ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು~ ಎಂದು ಹೇಳಿದರು.
ಗೋಷ್ಠಿಯಲ್ಲಿ ನೀರಿನ ಹಕ್ಕಿಗಾಗಿ ಜನಾಂದೋಲನದ ಸಂಯೋಜಕ ಪ್ರಭಾಕರ್ ಮತ್ತಿತರರು ಇದ್ದರು.