ಮದ್ದೂರು: ಸಮೀಪದ ವಳೆಗೆರೆಹಳ್ಳಿ ಗ್ರಾಮದಲ್ಲಿ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಭಾನುವಾರ ಸಂಭ್ರಮದಿಂದ ನಡೆಯಿತು.
ಶನಿವಾರ ಬೆಳಿಗ್ಗೆ ಶನೇಶ್ವರಸ್ವಾಮಿ ದೇಗುಲದಲ್ಲಿ ನವಗ್ರಹ ಪೂಜೆ, ಗಣಪತಿ ಪೂಜಾ ಕೈಂಕರ್ಯಗಳಿಂದ ಮಹೋತ್ಸವವು ಆರಂಭಗೊಂಡಿತು. ರಾತ್ರಿ ಗ್ರಾಮದ ಮಹಿಳೆಯರಿಂದ ಮೀಸಲು ನೀರು ತರುವುದು ಹಾಗೂ ಬಾಯಿಬೀಗ ಹರಕೆ ಅಭಿಷ್ಟೆಗಳು ಸಲ್ಲಿಕೆಯಾದವು. ನಂತರ ರಾತ್ರಿ ಪೂರ್ಣ ಸ್ವಾಮಿಯ ಗಿಂಡಿ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಶ್ರದ್ಧಾಭಕ್ತಿಯನ್ನು ಅರ್ಪಿಸಿದರು.
ಭಾನುವಾರ ಬೆಳಿಗ್ಗೆ ದೇಗುಲ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮುಖಂಡರಾದ ವಿ.ಅಶೋಕ್, ವಿ.ಸಿ.ಉಮಾಶಂಕರ್, ವಿ.ಟಿ.ಪುಟ್ಟಸ್ವಾಮಿಗೌಡ, ಎಸ್.ದಯಾನಂದ, ಚಿಕ್ಕಮರಿಯಪ್ಪ, ವಿ.ಎಂ.ಶಿವಕುಮಾರ್, ಜಗ್ಗಿಶೀನಪ್ಪ, ವೆಂಕಟೇಶ್, ಯೋಗೇಶ್, ಸುಧೀರ್, ಪಟೇಲ್ ಕೃಷ್ಣಪ್ಪ, ವೆಂಕಟೇಶಚಾರಿ, ಸಂಪತ್ತು ಇತರರು ಪಾಲ್ಗೊಂಡಿದ್ದರು.