ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಕಂಪೆನಿ ವ್ಯವಹಾರ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.
ನಗರದ ಇಂಡಿಯಾನ ಆಸ್ಪತ್ರೆ ಉದ್ಘಾಟನೆಗೆ ಶನಿವಾರ ಆಗಮಿಸಿದ್ದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಯಡಿಯೂರಪ್ಪ ತೀವ್ರತರವಾದ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ವರದಿ ನೀಡಿದ್ದರೂ, ವರದಿ ಶಿಫಾರಸಿನಂತೆ ರಾಜ್ಯ ಸರ್ಕಾರ ಯಾವುದೇ ವಿಚಾರಣೆ ನಡೆಸದೇ ಇದ್ದದ್ದು ಕಾನೂನು ಪ್ರಕಾರ ಲೋಪವಾಗಿದೆ ಎಂದರು.ಲೋಕಾಯುಕ್ತ ವರದಿಯನ್ನು ರಾಜ್ಯ ಸರ್ಕಾರ ಈ ಮುಂಚೆಯೇ ಜಾರಿಗೊಳಿಸಬೇಕಿತ್ತು. ಕೈಕಟ್ಟಿ ಕುಳಿತಿದ್ದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನ ಈ ತೀರ್ಪು ಛೀಮಾರಿ ಹಾಕಿದಂತಾಗಿದೆ ಎಂದರು.
ಚುನಾವಣೆಗೆ ಸಿದ್ಧ: ಬರುವ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣೆಯ ಸೂಚನೆಗಳು ಕಾಣುತ್ತಿವೆ. ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದರು.