ಕೊಯಮತ್ತೂರು(ಪಿಟಿಐ): ಹಣದುಬ್ಬರ ದರ ಏರಿಕೆ ಸಮಸ್ಯೆಯನ್ನು ನಿರ್ವಹಿಸುವುದು ದೊಡ್ಡ ಸವಾಲು ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಭಾರತ ಹತ್ತಿ ಗಿರಣಿ ಉದ್ಯಮಿಗಳ ಒಕ್ಕೂಟ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಾವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಯುವಂತೆ ಮಾಡುವುದು ಕಷ್ಟಕರ. ಸದ್ಯ ಹಣ್ಣು, ತರಕಾರಿಗಳ ಬೆಲೆಗಳು ಮೇಲ್ಮುಖ ಚಲನೆಯಲ್ಲಿದೆ. ಹೊಸ ಬೆಳೆಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ತರಕಾರಿಗಳು ಸ್ವಲ್ಪ ಅಗ್ಗವಾಗಬಹುದು ಎಂದರು.
ಕಳೆದ ಡಿಸೆಂಬರ್ನಲ್ಲಿ ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಶೇ 8.43ಎಂದು ಅಂದಾಜಿಸಲಾಗಿತ್ತು. ಇದು ಮಾರ್ಚ್ ಅಂತ್ಯದ ವೇಳೆಗೆ ಶೇ 7ಕ್ಕೆ ಇಳಿಯಲಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 8.5ನ್ನು ತಲುಪಲಿದೆ. ಕೃಷಿ ಕ್ಷೇತ್ರದ ವೃದ್ಧಿ ದರವೂ ವರ್ಷಾಂತ್ಯಕ್ಕೆ ಶೇ 4.5ರಷ್ಟು ವೃದ್ಧಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.