ಹಟ್ಟಿ ಚಿನ್ನದ ಗಣಿ: ಸ್ಥಳೀಯ ಚಿನ್ನದ ಗಣಿಗಳಲ್ಲಿ ಸಮರ್ಪಕವಾಗಿ ಗಾಳಿ ಬರುವಂತೆ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಗಣಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಕಾಳಜಿ ವಹಿಸಬೇಕು ಎಂದು ಬಳ್ಳಾರಿ ಗಣಿ ಸುರಕ್ಷಾ ಇಲಾಖೆ ನಿರ್ದೇಶಕ ವಿ. ಲಕ್ಷ್ಮೀ ನಾರಾಯಣ ತಿಳಿಸಿದರು.
ಶನಿವಾರ ಸ್ಥಳೀಯ ಹಟ್ಟಿ ಚಿನ್ನದ ಗಣಿ ಹಾಗೂ ಗಣಿ ಸುರಕ್ಷಾ ಸಂಸ್ಥೆ–ಕರ್ನಾಟಕ ವಲಯ–2, ಜಂಟಿಯಾಗಿ ಹಮ್ಮಿಕೊಂಡಿದ್ದ ಗಣಿ ಮಟ್ಟದ ಸುರಕ್ಷಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿರ್ಲಕ್ಷ್ಯದಿಂದ ಗಣಿಯಲ್ಲಿ ಅಪಘಾತ ಹೆಚ್ಚುತ್ತಿವೆ. ಗಣಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಬಳ್ಳಾರಿ ಗಣಿ ಸುರಕ್ಷಾ ಇಲಾಖೆ ಉಪ ನಿರ್ದೇಶಕ ಎನ್. ನಾಗೇಶ್ವರ ರಾವ್ ಹೇಳಿದರು.
ಸುರಕ್ಷತೆ ಕುರಿತು ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಎಂ ಶಫಿ ಒತ್ತಾಯಿಸಿದರು. ಗಣಿಯ ಪ್ರಧಾನ ವ್ಯವಸ್ಥಾಪಕ ಎ.ಆರ್ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಗಣಿ ವ್ಯವಸ್ಥಾಪಕ ಎಂ. ಶಾಂತಕುಮಾರ 2013ನೇ ಸಾಲಿನ ಸುರಕ್ಷಾ ವರದಿ ಕುರಿತು ಮಾಹಿತಿ ನೀಡಿದರು.
ಏಜೆಂಟ್ ಮತ್ತು ಉಪ ಪ್ರಧಾನ ವ್ಯವಸ್ಥಾಪಕ(ಗಣಿ) ಪ್ರಕಾಶ, ಕರ್ನಲ್ ಬಸವರಾಜ ದೊಡ್ಡ ಮನಿ, ಡಾ. ಪ್ರಭಾಕರ ಸಂಗೂರ ಮಠ, ಸಿ. ರವಿ, ಟಿ.ಕೆ. ಜಾನ್ ವೆಸ್ಲಿ ಹಾಗೂ ಇತರರು ಇದ್ದರು. ಅಮರಗುಂಡಪ್ಪ ನಿರೂಪಿಸಿದರು. ತ್ಯಾಗರಾಜ ಸ್ವಾಗತಿಸಿದರು. ಪಿ. ಸುರೇಶ ವಂದಿಸಿದರು. ಸುರಕ್ಷತೆ ಕುರಿತು ನಡೆದ ಸ್ಪರ್ಧೆಗಳಲ್ಲಿ ವಿಜೇತ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.
ಶ್ರದ್ಧಾಂಜಲಿ: ಕಾರ್ಯಕ್ರಮಕ್ಕೆ ಮುಂಚೆ 2 ನಿಮಿಷ ಮೌನಾಚರಣೆ ಮಾಡಿ ನೆಲ್ಸನ್ ಮಂಡೇಲಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.