ಮಂಡ್ಯ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಪರಿಚಯಿಸುವ ವ್ಯವಸ್ಥೆ ಭಾರತದಲ್ಲಿ ಮಾತ್ರ ಇದೆ ಎಂದು ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿ ಶ್ರೇಷ್ಠವಾಗಿದ್ದು, ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ವೇದ, ಆಗಮ, ನಾಡಿನ ಕಲೆಯನ್ನು ರೂಢಿಸಿಕೊಳ್ಳುವಂತೆ ಸೂಕ್ತ ತರಬೇತಿ ನೀಡಬೇಕು ಎಂದರು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನೆಡೆಸುವ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಜೊತೆಯಾಗಿ ಹೆಜ್ಜೆಹಾಕಬೇಕು. ಮಕ್ಕಳು ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಡಿ. ಶಿವಕುಮಾರ್, ಚಿಕ್ಕಸ್ವಾಮಿ, ನಾಗೇಶ್್್, ಚಂದ್ರಕಾಂತ್್, ಚಂದ್ರಶೇಖರ್, ಜಿ.ಎನ್. ಶಿವರುದ್ರಪ್ಪ ಇತರರು ಪಾಲ್ಗೊಂಡಿದ್ದರು.