ಬೆಂಗಳೂರು:‘ಸರ್ಕಾರದ ಬಳಿ ಹಣ ಇಲ್ಲ. ಇದೊಂದು ದರಿದ್ರ ಸರ್ಕಾರ ಎಂದು ನಾನು ಟೀಕಿಸಿದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ನಲ್ಲಿ ಉತ್ತರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಸರ್ಕಾರದ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಬಜೆಟ್ನಲ್ಲೇ ಉತ್ತರ ಸಿಕ್ಕಿದೆ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
2020–21ನೇ ಸಾಲಿನ ಬಜೆಟ್ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ‘ಹಣದುಬ್ಬರವಿರುವಾಗ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಕನಿಷ್ಠ ಪಕ್ಷ ಶೇ 5ರಿಂದ ಶೇ 6ರಷ್ಟು ಹೆಚ್ಚಳವಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿವರ್ಷವೂ ಬಜೆಟ್ ಗಾತ್ರ ಶೇ 10ರಷ್ಟು ಹೆಚ್ಚಳವಾಗುತ್ತಿತ್ತು. ನನ್ನ ಅವಧಿಯ ಮೊದಲ ಬಜೆಟ್ ಗಾತ್ರ ₹ 1.02 ಲಕ್ಷ ಕೋಟಿ ಇದ್ದುದು ಕೊನೆಯ ಬಜೆಟ್ ವೇಳೆಗ ₹ 2.18 ಲಕ್ಷ ಕೋಟಿಗೆ ಹೆಚ್ಚಳವಾಗಿತ್ತು. 2019–20ನೇ ಸಾಲಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರದ ಕೇವಲ ಶೇ 1.6ರಷ್ಟು ಹೆಚ್ಚಳವಾಗಿದೆ’ ಎಂದು ಬೊಟ್ಟು ಮಾಡಿ ತೋರಿಸಿದರು.
‘ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಅನುಕೂಲ ಎಂದು ಬಿಜೆಪಿ ಹೇಳಿತ್ತು.ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಕೇಂದ್ರದ ಜಿಡಿಪಿ ಶೇ 4.6 ಇದೆ. ನಮ್ಮ ಲೆಕ್ಕದಲ್ಲಿ ಇದು ಶೇ 4 ಇದೆ. ರಾಜ್ಯದಲ್ಲಿ 2019–20ರ ಸಾಲಿನಲ್ಲಿ ಜಿಡಿಪಿಯು ನಿರೀಕ್ಷೆಗಿಂತ ಶೇ 1ರಷ್ಟು ಕಡಿಮೆಯಾಗಿದೆ. ಕೇಂದ್ರದಿಂದ ಬರುವ ಅನುದಾನ ₹ 16 ಸಾವಿರ ಕೋಟಿಗಳಷ್ಟು ಕಡಿಮೆ ಆಗಿದೆ. 15ನೇ ಹಣಾಸು ಆಯೋಗದಿಂದ ಬರುವ ಅನುದಾದಲ್ಲೇ ₹ 11,215 ಕೋಟಿ ಖೋತಾ ಆಗಲಿದೆ. ಇದು ಬಜೆಟ್ ಮೂಲಕ ನಮಗೆ ಸಿಕ್ಕಿದ ಉತ್ತರ’ ಎಂದು ಎಳೆಎಳೆಯಾಗಿ ಬಿಡಿಸಿಟ್ಟರು.
‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಸರ್ಕಾರ ಜನರಿಗೆ ದ್ರೋಹ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡುಬರುತ್ತಿಲ್ಲ. ಕೃಷಿಗೆ ಬಜೆಟ್ನಲ್ಲಿ ಹೇಳಿಕೊಳ್ಳುವಂಥ ಕೊಡುಗೆಗಳೇನೂ ಇಲ್ಲ. ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿದ ಮಾತ್ರಕ್ಕೆ ರೈತರು ಉದ್ದಾರ ಆಗುತ್ತಾರಾ. ಅವರು ವ್ಯವಸಾಯ ಮಾಡಿದ್ದಾರೊ ಗೊತ್ತಿಲ್ಲ. ಅವರು ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ನಾನೂ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ. ಅವರು ಯಾವುದಾದರೂ ಶಾಲು ಹಾಕಿಕೊಳ್ಳಲಿ. ಬಜೆಟ್ನಲ್ಲಿ ಸುಳ್ಳು ಹೇಳುವುದೇಕೆ’ ಎಂದು ಪ್ರಶ್ನಿಸಿದರು.
‘ನೀರಾವರಿಗೆ ₹21 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಯೋಜನೆಗಳೂ ಇದರಲ್ಲಿ ಸೇರಿದೆ. ಎತ್ತಿನಹೊಳೆಗೆ ₹1,500 ಕೋಟಿ ಏನೇನೂ ಸಾಲದು. ಕೃಷ್ಣಾ ಮೇಲ್ದಂಡೆ ಯೋಜನೆಗೆ ₹40 ಸಾವಿರ ಕೋಟಿ ಬೇಕು. ಈ ಯೋಜನೆ ಬಗ್ಗೆ ಪ್ರಸ್ತಾಪವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಹದಾಯಿ ಯೋಜನೆಗೆ ಕನಿಷ್ಠ ₹ 2 ಸಾವಿರ ಕೋಟಿ ನೀಡಬೇಕಿತ್ತು. ಆದರೆ, ಕೇವಲ ₹500 ಕೋಟಿ ನೀಡಿದ್ದಾರೆ. ಮಹದಾಯಿ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.
‘ಮಹದಾಯಿ ಯೋಜನೆಗೆ ಅಧೀಸೂಚನೆ ಹೊರಡಿಸಿದ್ದನ್ನು ತಮ್ಮ ಸಾಧನೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ? ನಮ್ಮ ಅವಧಿಯಲ್ಲಿ ಹೋರಾಟ ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ನಡೆಸಿದ ಕಾನೂನು ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡುವುದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಲಿಲ್ಲ’ ಎಂದರು.
‘ಬಜೆಟ್ನಲ್ಲಿ ಹೊಸ ಯೋಜನೆಗಳ ಪ್ರಸ್ತಾಪವೇ ಇಲ್ಲ. ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆಹಾರ ಇಲಾಖೆಗೆ ಶೇ 1ರಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ಇನ್ನು ಯಾವ ಯೋಜನೆಗೆ ತಡೆ ನೀಡುತ್ತಾರೊ ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ದಲ್ಲಿ ಆಹಾರದ ದರ ಹೆಚ್ಚಿಸಬಾರದು. ಇದಕ್ಕೆ ಸರ್ಕಾರವೇ ಹಣ ನೀಡಬೇಕು’ ಎಂದು ಒತ್ತಾಯಿಸಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಗೆ ಹಿಂದಿನ ಸಾಲಿನಲ್ಲಿ ₹30,150 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಈ ಮೊತ್ತದಲ್ಲಿ ₹ 4 ಸಾವಿರ ಕೋಟಿ ಹೆಚ್ಚಳವಾಗಬೇಕಿತ್ತು. ಆದರೆ. ಈ ಯೋಜನೆಗೆ ಅನುದಾನವನ್ನು ₹26,131 ಕೋಟಿಗೆ ಇಳಿಸಿದ್ದಾರೆ. ಮೂಗಿಗೆ ತುಪ್ಪ ಹಚ್ಚಲು ಘೋಷಣೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.
ರೈತರ ಸಾಲ ಮನ್ನಾ ಯೋಜನೆ ಏನಾಯಿತು ಎಂದು ಹೇಳಬೇಕಿತ್ತು. ಆದರೆ, ಆದರ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಭೂಬ್ಯಾಂಕ್ಗಳ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು. ಅದನ್ನೂ ಪ್ರಸ್ತಾಪಿಸಿಲ್ಲ.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳುತ್ತಿದ್ದಾರೆ. ಆದರೆ, ಅಲ್ಪ ಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರಿಗೆ ಯಾವುದೆ ವಿಶೇಷ ಯೋಜನೆ ಘೋಷಣೆ ಮಾಡಿಲ್ಲ ಎಂದರು.
‘ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಧೀಯಡಿ ವಿಶೇಷ ಸ್ಥಾನಮಾನ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಈಗಿನ ಸರ್ಕಾರ ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದರು. ಈ ಪ್ರದೇಶದ ಅಭಿವೃದ್ಧಿಯನ್ನೂ ಮಾಡಬೇಕಲ್ಲವೆ. ಈ ಪ್ರದೇಶದಎಲ್ಲ ಪಕ್ಷದ ಶಾಸಕರು ಸೇರಿ ಬಜೆಟ್ನಲ್ಲಿ ಕನಿಷ್ಠಪಕ್ಷ ₹2500 ಕೋಟಿ ಮೀಸಲಿಡುವಂತೆ ಕೋರಿದ್ದರು. ಆದರೂ ಬಜೆಟ್ನಲ್ಲಿ ನಮ್ಮ ಆಡಳಿತಾವಧಿಯಲ್ಲಿ ಕೊಟ್ಟಷ್ಟೇ ( ₹1500 ಕೋಟಿ) ಅನುದಾನವನ್ನು ನೀಡಿದ್ದಾರೆ’ ಎಂದರು.
‘ಬೆಂಗಳೂರಿನ ಚಿತ್ರಣವನ್ನು ಆರು ತಿಂಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ ಹೇಳಿದ್ದರು. ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ₹10 ಸಾವಿರ ಕೋಟಿ ಮೀಸಲಿಟ್ಟಿತ್ತು. ಈಗಿನ ಸರ್ಕಾರ ₹8 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಪೆರಿಫೆರೆಲ್ ವರ್ತುಲ ರಸ್ತೆ ಯೊಜನೆಯ ಪ್ರಸ್ತಾಪವನ್ನೇ ಮಾಡಿಲ್ಲ. ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಕೇವಲ ₹1 ಕೋಟಿ ನೀಡಿದೆ. ಇವರು ₹500 ಕೋಟಿ ಮೀಸಲಿಟ್ಟಿದ್ದಾರೆ. ಈ ಯೋಜನೆ ಆರಂಭವೇ ಆಗುವುದಿಲ್ಲ’ ಎಂದು ಭವಿಷ್ಯ ನುಡಿದರು.
ಯಾವುದೇ ಕಾರಣಕ್ಕೂ ಚಿತ್ರನಗರಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು.
**
ಇದು ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಹಿಂದುಳಿದವರ ವಿರೋಧಿ ಬಜೆಟ್. ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್ ಇದು. ಆರು ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ಮಂಡಿಸಿದ್ದಷ್ಟೇ ಬದಲಾವಣೆ.
-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.