ನವದೆಹಲಿ: ಕೇಂದ್ರ ಸರ್ಕಾರ ತೆರಿಗೆ ವರಮಾನ ಕೊರತೆ ಎದುರಿಸುತ್ತಿದೆ. ಹೀಗಾಗಿ, ಎರಡನೇ ಮಧ್ಯಂತರ ಲಾಭಾಂಶ ಪಾವತಿಸುವಂತೆ ‘ಐಒಸಿ’ ಮತ್ತು ‘ಒಎನ್ಜಿಸಿ’ಯಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆಒತ್ತಾಯಿಸುತ್ತಿದೆ.
ಈ ಸಂಬಂಧ ಐಒಸಿ ಇದೇ 19ರಂದು ಆಡಳಿತ ಮಂಡಳಿ ಸಭೆ ಕರೆದಿದೆ. ಆದರೆ, ತನ್ನ ಬಳಿ ಹೆಚ್ಚುವರಿ ನಗದು ಇಲ್ಲ ಎನ್ನುವ ಮೂಲಕ ಎರಡನೇ ಮಧ್ಯಂತರ ಲಾಭಾಂಶ ಪಾವತಿಸಲು ‘ಒಎನ್ಜಿಸಿ’ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಗಳ ಪ್ರಕಾರ, ಕಂಪನಿಯು ಲಾಭಾಂಶ ಘೋಷಿಸಿದ ಒಂದು ತಿಂಗಳ ಒಳಗೆ ಇನ್ನೊಂದು ಬಾರಿ ಲಾಭಾಂಶ ನೀಡುವಂತಿಲ್ಲ. ಇಂತಹ ಲಾಭಾಂಶ ನೀಡಲು ಕಂಪನಿಗಳು ‘ಸೆಬಿ’ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ಜಿಎಸ್ಟಿ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದಕೇಂದ್ರ ಸರ್ಕಾರ ಶೇ 3.4ರ ವಿತ್ತೀಯ ಕೊರತೆ ಗುರಿ ತಲುಪಲು ಹೆಣಗಾಡುತ್ತಿದೆ. ₹ 30 ಸಾವಿರ ಕೋಟಿಯಿಂದ ₹ 40 ಸಾವಿರ ಕೋಟಿಗಳವರೆಗೆ ಜಿಎಸ್ಟಿ ಕೊರತೆ ಎದುರಾಗುವ ಅಂದಾಜು ಮಾಡಲಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿಯೂ ಇಷ್ಟೇ ಮೊತ್ತದ ಕೊರತೆಯಾಗಲಿದೆ.