ನವದೆಹಲಿ: ಬಾಬಾ ರಾಮ್ ದೇವ್, ಅವರ ತಮ್ಮ ರಾಮ್ ಭರತ್ ಹಾಗೂ ಆಚಾರ್ಯ ಬಾಲಕೃಷ್ಣ ಅವರುಖಾದ್ಯ ತೈಲ ತಯಾರಿಸುವ ರುಚಿ ಸೋಯಾ ಕಂಪನಿಯ ಆಡಳಿತ ಮಂಡಳಿ ಸೇರಲಿದ್ದಾರೆ.
ಹಿಂದಿನ ವರ್ಷ ನಡೆದ ದಿವಾಳಿ ಪ್ರಕ್ರಿಯೆಯಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯು ರುಚಿ ಸೋಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರಿಂದಾಗಿ ಹೊಸ ಆಡಳಿತ ಮಂಡಳಿಯು ಈ ಮೂವರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಪಡೆದುಕೊಂಡಿದ್ದು, ಅದಕ್ಕೆ ಒಪ್ಪಿಗೆ ನೀಡುವಂತೆ ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಷೇರುದಾರರನ್ನು ಕೇಳಿದೆ.
ಆಗಸ್ಟ್ 19ರಂದು ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಭರತ್ ಅವರನ್ನು ಆಗಸ್ಟ್ 19ರಿಂದ 2022ರ ಡಿಸೆಂಬರ್ 17ರವರೆಗಿನ ಅವಧಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಆಚಾರ್ಯ ಬಾಲಕೃಷ್ಣ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ಹಾಗೂ ರಾಮ್ದೇವ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ನೇಮಕಕ್ಕೆ ಷೇರುದಾರರ ಒಪ್ಪಿಗೆ ಬೇಕಿದೆ ಎಂದು ರುಚಿ ಸೋಯಾ ತಿಳಿಸಿದೆ.
ಪತಂಜಲಿ ಆಯುರ್ವೇದ ಸಂಸ್ಥೆಯು ₹ 4,350 ಕೋಟಿಗೆ ಸ್ವಾಧೀನ ಪಡಿಸಿಕೊಂಡಿತ್ತು. ಇದರಲ್ಲಿ ₹ 4,235 ಕೋಟಿಯನ್ನು ರುಚಿ ಸೋಯಾ ಕಂಪನಿಯ ಸಾಲ ಮರುಪಾವತಿಸಲು ಹಾಗೂ ಉಳಿದ ₹ 115 ಕೋಟಿಯನ್ನು ದುಡಿಯುವ ಬಂಡವಾಳದ ಉದ್ದೇಶಕ್ಕೆ ಬಳಸಲಾಗಿದೆ.