ಹೈದರಾಬಾದ್ (ಪಿಟಿಐ): ಭಾರತವು ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕತೆ ಆಗಿರುವುದು ಉತ್ತೇಜನಕಾರಿ ಬೆಳವಣಿಗೆ. ಆದರೆ, ತಲಾ ಆದಾಯವೂ ಹೆಚ್ಚಳ ಆಗಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮಾಜಿ ಗವರ್ನರ್ ಸಿ. ರಂಗರಾಜನ್ ಶನಿವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮಹತ್ವದ ಸಾಧನೆ ಇದಾಗಿದೆ. ಆದರೆ, ತಲಾ ಆದಾಯದ ಬೆಳವಣಿಗೆಯ ವಿಷಯದಲ್ಲಿ ಹಾಗಾಗಿಲ್ಲ. ತಲಾ ಆದಾಯದ ವಿಷಯದಲ್ಲಿ 2020ರಲ್ಲಿ 197 ದೇಶಗಳ ಸಾಲಿನಲ್ಲಿ ಭಾರತವು 142ನೇ ಸ್ಥಾನ ಪಡೆದುಕೊಂಡಿದೆ. ತಲಾ ಆದಾಯದ ಹೆಚ್ಚಳದ ವಿಷಯದಲ್ಲಿ ನಾವು ಸಾಗಬೇಕಿರುವ ಹಾದಿಯನ್ನು ಇದು ಸೂಚಿಸುತ್ತಿದೆ. ಈಗಿರುವ ತಲಾ ಆದಾಯವು ಹೆಚ್ಚಳ ಆಗಬೇಕಿದ್ದರೆ ನಾವು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುವುದೇ ಏಕೈಕ ಆಯ್ಕೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಎರಡು ದಶಕಗಳವರೆಗೆ ದೇಶವು ನಿರಂತರವಾಗಿ ಶೇ 7ರಷ್ಟು ಆರ್ಥಿಕ ಬೆಳವಣಿಗೆ ಕಂಡಲ್ಲಿ ಆರ್ಥಿಕತೆಯಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆಗೆ ಕಾರಣವಾಗಲಿದೆ. ಭಾರತವು ‘ಅಭಿವೃದ್ಧಿ ಹೊಂದಿದ ದೇಶ’ ಎನ್ನುವ ಸ್ಥಾನಮಾನದ ಸಮೀಪಕ್ಕೆ ಬರಲಿದೆ ಎಂದಿದ್ದಾರೆ.
ಅಭಿವೃದ್ಧಿ ಸಾಧಿಸುವ ಕಾರ್ಯತಂತ್ರವು ಹಲವು ಆಯಾಮಗಳಿಂದ ಕೂಡಿರಬೇಕು. ದೇಶದ ತಯಾರಿಕಾ ವಲಯ ಮತ್ತು ರಫ್ತು ಪ್ರಬಲವಾಗಿರಬೇಕು ಎಂದು ರಂಗರಾಜನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.