ನವದೆಹಲಿ: ‘ಧಾರಣೆ ಏರುಮುಖವಾಗಿದ್ದರೂ ಆಮದಾಗಿರುವ ಈರುಳ್ಳಿ ಖರೀದಿಸಲು ರಾಜ್ಯಗಳು ಹಿಂದೇಟು ಹಾಕುತ್ತಿವೆ. ಇದು ಕೇಂದ್ರವನ್ನು ಚಿಂತೆಗೀಡು ಮಾಡಿದೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
‘ಪ್ರತಿ ಕೆ.ಜಿಗೆ ₹ 55ರಂತೆ ಸಾರಿಗೆ ವೆಚ್ಚವಿಲ್ಲದೇ ಆಮದು ಈರುಳ್ಳಿಯನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಸಿದ್ಧವಾಗಿದೆ. ಆದರೆ, ರಾಜ್ಯಗಳು ಆಸಕ್ತಿ ತೋರಿಸುತ್ತಿಲ್ಲ. ಆಮದು ಸರಕನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಹೀಗಾಗಿ ಆಮದಾಗಿರುವ ಸರಕನ್ನು ಖಾಲಿ ಮಾಡುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ’ ಎಂದಿದ್ದಾರೆ.
ಕಳೆದೆರಡು ತಿಂಗಳುಗಳಿಂದ ಕೆ.ಜಿಗೆ ₹ 100ನ್ನು ದಾಟಿದ್ದ ಧಾರಣೆ ಇದೀಗ ತುಸು ಇಳಿಕೆ ಕಾಣಲಾರಂಭಿಸಿದೆ. ಆಮದು ಮತ್ತು ಹೊಸ ಬೆಳೆ ಬರುತ್ತಿರುವುದು ಇದಕ್ಕೆ ಕಾರಣವಾಗಿದೆ.
ಆಮದಾಗಿರುವುದರ ರುಚಿ ದೇಶಿ ಈರುಳ್ಳಿಗಿಂತಲೂ ಭಿನ್ನವಾಗಿದೆ. ಜತೆಗೆ, ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದರಿಂದ ಆಮದಾಗಿರುವ ಈರುಳ್ಳಿ ಖರೀದಿಸಲು ಜನ ಮುಂದಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಖರೀದಿಸಿರುವ ರಾಜ್ಯಗಳು: ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ.