ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇ ಪ್ರಕರಣ: ಚಿತ್ರಾ ರಾಮಕೃಷ್ಣ ಸಿಬಿಐ ವಶಕ್ಕೆ

Last Updated 7 ಮಾರ್ಚ್ 2022, 15:26 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿಯ ನ್ಯಾಯಾಲಯ ಏಳು ದಿನಗಳವರೆಗೆ ಸಿಬಿಐ ವಶಕ್ಕೆ ನೀಡಿದೆ.

ಷೇರುಗಳನ್ನು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್‌ ಅವರು ಸೋಮವಾರ ಈ ಆದೇಶ ನೀಡಿದ್ದಾರೆ.

ಚಿತ್ರಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳವರೆಗೆ ವಶಕ್ಕೆ ನೀಡಬೇಕೆಂದು ಸಿಬಿಐ, ನ್ಯಾಯಾಲಯವನ್ನು ಕೋರಿತ್ತು.

‘ಚಿತ್ರಾ ಅವರಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಅವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾರೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಪ್ರಕರಣದ ಹಿಂದಿನ ಪಿತೂರಿ ಹಾಗೂ ಅದರಲ್ಲಿ ಭಾಗಿಯಾಗಿರುವ ಇತರ ಎನ್‌ಎಸ್‌ಇ ಅಧಿಕಾರಿಗಳನ್ನು ಮತ್ತು ದಲ್ಲಾಳಿಗಳನ್ನು ಪತ್ತೆಹಚ್ಚಬೇಕಿದೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ.

‘ಈಗಾಗಲೇ ಸಿಬಿಐ ವಶದಲ್ಲಿರುವ ಇನ್ನೊಬ್ಬ ಆರೋಪಿ ಆನಂದ ಸುಬ್ರಮಣಿಯನ್ ಅವರನ್ನೂ ಲಭ್ಯವಿರುವ ಡಿಜಿಟಲ್‌ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣೆಗೆ ಒಳಪಡಿಸುವ ಅಗತ್ಯ ಇದೆ’ ಎಂದೂ ಸಿಬಿಐ ಪ್ರತಿಪಾದಿಸಿದೆ.

‘ಆನಂದ ಸುಬ್ರಮಣಿಯನ್ ಜೊತೆ ಪಿತೂರಿ ನಡೆಸಿ ಚಿತ್ರಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದೂ ಸಿಬಿಐ ಆರೋಪಿಸಿದೆ. ಚಿತ್ರಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT