ನವದೆಹಲಿ: ಜಿಎಸ್ಟಿ ದರ ಸುಧಾರಣೆಗೆ ರಚಿಸಿರುವ ಸಚಿವರ ಸಮಿತಿಯ ಸಂಚಾಲಕ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಆಲೋಚನೆ ನಡೆಸಿದೆ.
ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಆಗಿದ್ದಾಗ, ಈ ಸಮಿತಿಯ ಸಂಚಾಲಕ ಆಗಿದ್ದರು. ಅವರ ಅಧಿಕಾರ ಅವಧಿ ಪೂರ್ಣಗೊಂಡ ನಂತರ ಈ ಸ್ಥಾನವು ಖಾಲಿ ಇದೆ. ಜಿಎಸ್ಟಿ ಮಂಡಳಿಯು ಏಳು ಸದಸ್ಯರ ಈ ಸಮಿತಿಯನ್ನು 2021ರ ಸೆಪ್ಟೆಂಬರ್ನಲ್ಲಿ ರಚಿಸಿದೆ.
ಈಗ ಹೊಸ ಸಂಚಾಲಕರನ್ನು ನೇಮಿಸುವ ಉದ್ದೇಶದಿಂದ ಹಣಕಾಸು ಸಚಿವಾಲಯವು ಇತರ ಸದಸ್ಯರ ಜೊತೆ ಸಮಾಲೋಚನೆ ಆರಂಭಿಸಿದೆ. ‘ಕರ್ನಾಟಕವು ಸಮಿತಿಯ ಸದಸ್ಯ ರಾಜ್ಯವಾಗಿ ಮುಂದುವರಿಯಬಹುದು. ಸದಸ್ಯರ ನಡುವಿನ ಸಮಾಲೋಚನೆ ಆಧರಿಸಿ ಹೊಸ ಸಂಚಾಲಕರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.
ಸಾಮಾನ್ಯವಾಗಿ, ಸಮಿತಿಯ ಅತ್ಯಂತ ಹಿರಿಯ ಸದಸ್ಯರನ್ನು ಸಂಚಾಲಕ ಆಗಿ ನೇಮಿಸುವ ಪರಿಪಾಠ ಇದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಇರಿಸಿಕೊಂಡಿರುವ ಕಾರಣ, ಅವರನ್ನೇ ಸಂಚಾಲಕ ಆಗಿ ನೇಮಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಇರುವ ತೆರಿಗೆ ಹಂತಗಳನ್ನು ಸರಳಗೊಳಿಸುವುದು, ವಿನಾಯಿತಿ ಪಟ್ಟಿಯಲ್ಲಿರುವ ಉತ್ಪನ್ನಗಳು ಹಾಗೂ ಸೇವೆಗಳನ್ನು ಪರಿಶೀಲನೆಗೆ ಒಳಪಡಿಸುವುದು ಹಾಗೂ ಜಿಎಸ್ಟಿ ವರಮಾನವನ್ನು ಹೆಚ್ಚಿಸುವುದು ಈ ಸಮಿತಿಯ ಹೊಣೆ.