ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಬ್ಸಿಡಿ ₹300ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

Published 4 ಅಕ್ಟೋಬರ್ 2023, 11:11 IST
Last Updated 4 ಅಕ್ಟೋಬರ್ 2023, 11:11 IST
ಅಕ್ಷರ ಗಾತ್ರ

ನವದೆಹಲಿ: ಉಜ್ವಲಾ ಯೋಜನೆಯ ಅಡಿಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಪಡೆದವರಿಗೆ ನೀಡುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರವು ಪ್ರತಿ ಸಿಲಿಂಡರ್‌ಗೆ ₹300ಕ್ಕೆ ಹೆಚ್ಚಿಸಿದೆ. ಈ ಮೂಲಕ, ಅಡುಗೆ ಅನಿಲ ದರ ಹೆಚ್ಚಾಗಿದೆ ಎಂದು ಟೀಕಿಸುತ್ತಿರುವ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಕೇಂದ್ರವು ಯತ್ನಿಸಿದೆ.

14.2 ಕೆ.ಜಿ. ತೂಕದ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ ₹200ರಷ್ಟು ಸಬ್ಸಿಡಿ ನೀಡಲಾಗುತ್ತದೆ. ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ಅನ್ವಯವಾಗುತ್ತದೆ. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಈ ಸಬ್ಸಿಡಿ ಮೊತ್ತವನ್ನು ₹300ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಈ ಕ್ರಮದಿಂದಾಗಿ 9.6 ಕೋಟಿ ಕುಟುಂಬಗಳಿಗೆ ಪ್ರಯೋಜನ ಆಗಲಿದೆ. ಕೇಂದ್ರವು ಅಡುಗೆ ಅನಿಲ ಸಿಲಿಂಡರ್ ದರವನ್ನು ಆಗಸ್ಟ್‌ನಲ್ಲಿ ಪ್ರತಿ ಸಿಲಿಂಡರ್‌ಗೆ ₹200ರಷ್ಟು ತಗ್ಗಿಸಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಕೇಂದ್ರವು ಈ ಕ್ರಮ ಕೈಗೊಂಡಿತ್ತು.

ಉಜ್ವಲಾ ಯೋಜನೆಯ ಅಡಿಯಲ್ಲಿ ಸಿಲಿಂಡರ್ ಪಡೆದವರಿಗೆ ಈ ಬೆಲೆ ಇಳಿಕೆಯ ನಂತರ, ₹200ರಷ್ಟು ಸಬ್ಸಿಡಿ ಮೊತ್ತವನ್ನೂ ಪರಿಗಣಿಸಿದರೆ ಪ್ರತಿ ಸಿಲಿಂಡರ್‌ ಬೆಲೆಯು ₹703 ಆಗುತ್ತಿತ್ತು. ಈಗ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿರುವುದರ ಪರಿಣಾಮವಾಗಿ ಸಿಲಿಂಡರ್ ಬೆಲೆಯು ಈ ಯೋಜನೆಯ ಫಲಾನುಭವಿಗಳಿಗೆ ₹603 ಆಗಲಿದೆ. ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT