ನವದೆಹಲಿ: ಅಕ್ರಮವಾಗಿ ಪಾನ್ ಮಸಾಲಾ ತಯಾರಿಸಿ ಪೂರೈಸುವ ಮೂಲಕ ₹ 832 ಕೋಟಿ ಮೊತ್ತದ ತೆರಿಗೆ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಜಿಎಸ್ಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.
ಕೇಂದ್ರ ಜಿಎಸ್ಟಿಯ ದೆಹಲಿ ಪಶ್ಚಿಮ ಆಯುಕ್ತರ ಕಚೇರಿಯ ಅಧಿಕಾರಿಗಳು ಈ ತೆರಿಗೆ ವಂಚನೆ ಪ್ರಕರಣವನ್ನು ಬಯಲು ಮಾಡಿದ್ದಾರೆ. ನೋಂದಣಿ ಮಾಡದೆ, ಯಾವುದೇ ರೀತಿಯ ತೆರಿಗೆ ಪಾವತಿಸದೇ ಪಾನ್ ಮಸಾಲಾ ತಯಾರಿಕೆ ಮತ್ತು ಪೂರೈಕೆ ಮಾಡಲಾಗುತ್ತಿತ್ತು ಎಂದು ಸಚಿವಾಲಯ ಹೇಳಿದೆ.
ಅಕ್ರಮವಾಗಿ ನಡೆಯುತ್ತಿದ್ದ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ವೇಳೆ, ಪಾನ್ ಮಸಾಲಾ ತಯಾರಿಕೆಗೆ ಬಳಸುತ್ತಿದ್ದ ₹ 4.14 ಕೋಟಿ ಮೌಲ್ಯದ ಕಚ್ಚಾ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. 65 ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹೇಳಿದೆ.