ಬೆಂಗಳೂರು: ಚಿಲ್ಲರೆ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ತಲುಪಿದ್ದ 15 ತಿಂಗಳ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಆಗಸ್ಟ್ನಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯವು ರಾಯಿಟರ್ಸ್ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ತರಕಾರಿಗಳ ಬೆಲೆ ಇಳಿಕೆ ಕಂಡಿರುವುದರಿಂದ ಹಣದುಬ್ಬರವು ಆಗಸ್ಟ್ನಲ್ಲಿ ಕಡಿಮೆ ಆಗಲಿದೆ. ಹೀಗಿದ್ದರೂ ಆರ್ಬಿಐನ ಗರಿಷ್ಠ ಮಿತಿಗಿಂತಲೂ (ಶೇ 6) ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 4ರಿಂದ 7ರವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ಆಗಸ್ಟ್ನಲ್ಲಿ ಹಣದುಬ್ಬರವು ಶೇ 7ಕ್ಕೆ ತಲುಪಿದೆ ಎಂದು ಶೇ 45ರಷ್ಟು ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಜುಲೈನಲ್ಲಿ ಶೇ 7.44ರಷ್ಟು ಆಗಿದೆ. ಹಣದುಬ್ಬರದ ಅಂಕಿ–ಅಂಶವು ಮಂಗಳವಾರ ಬಿಡುಗಡೆ ಆಗಲಿದೆ.
ಮುಂಗಾರು ಕೊರತೆಯು ಕೆಲವು ಬೆಳೆಗಳ ನಾಶಕ್ಕೆ ಕಾರಣವಾಗಿದೆ. ಸರ್ಕಾರವು ಸಬ್ಸಿಡಿ ದರದಲ್ಲಿ ಕೆಲ ತರಕಾರಿಗಳನ್ನು ಮಾರಾಟ ಮಾಡುತ್ತಿರುವುದು ಮತ್ತು ಕೆಲವು ಧಾನ್ಯಗಳ ರಫ್ತು ನಿಷೇಧ ಮಾಡಿರುವುದರಿಂದ ಕುಟುಂಬಗಳಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಹೀಗಾಗಿ ಆಹಾರ ಹಣದುಬ್ಬರವು ಇಳಿಕೆ ಕಾಣಲಿದೆ. ಆದರೆ, ಏರಿಕೆ ಕಾಣುತ್ತಿರುವ ಇಂಧನ ದರವು ಹಣದುಬ್ಬರ ಇಳಿಕೆ ಪ್ರಮಾಣವನ್ನು ಸೀಮಿತಗೊಳಿಸಲಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.