ದೇಶದಲ್ಲಿ ಜಿಎಸ್ಟಿ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದರೂ ಮೂಲದಲ್ಲಿಯೇ ತೆರಿಗೆ ಕಡಿತದ ಉಪಬಂಧಗಳ ಜಾರಿಗೊಳಿಸುವಿಕೆಯನ್ನು ಹಲವಾರು ಕಾರಣಗಳಿಂದ ಮುಂದೂಡುತ್ತಲೇ ಬರಲಾಗಿತ್ತು. ಅಕ್ಟೋಬರ 1 ರಿಂದ ಈ ಸೌಲಭ್ಯವನ್ನು ದೇಶದಾದ್ಯಂತ ಜಾರಿಗೆ ತರಲು ಅಧಿಸೂಚನೆ ಹೊರಡಿಸಲಾಗಿದೆ.ಟಿಡಿಎಸ್ ಉಪಬಂಧಗಳು ಮೂಲದಲ್ಲಿ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಕಾಯ್ದೆಯಲ್ಲಿ ಯಾವುದೇ ಗೊಂದಲಗಳಿಗೆ ಎಡೆಯಿಲ್ಲದಂತೆ ವಿವರಗಳನ್ನು ನೀಡಲಾಗಿದೆ. ತೆರಿಗೆ ಕಡಿತ ಪ್ರಾಧಿಕಾರಗಳ ನೋಂದಣಿ, ರಿಟರ್ನ ಸಲ್ಲಿಕೆ, ತೆರಿಗೆ ಕಡಿತ ಮತ್ತು ಸಂದಾಯ, ಕಾಯ್ದೆಯ ಉಲ್ಲಂಘನೆಯಿಂದ ಉದ್ಭವಿಸುವ ಬಡ್ಡಿ ಮತ್ತು ದಂಡ ಪಾವತಿಯ ಕುರಿತ ವಿವರಗಳಿವೆ.
ಟಿಡಿಎಸ್ ಪ್ರಾಧಿಕಾರ
ಟಿಡಿಎಸ್ ಪ್ರಾಧಿಕಾರಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ ಸರ್ಕಾರಗಳ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸರಕಾರಿ ಏಜೆನ್ಸಿಗಳು, ಜಿಎಸ್ಟಿ ಮಂಡಳಿಯ ಶಿಫಾರಸ್ಸಿನ ಅನ್ವಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಸೊಸೈಟಿಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಸ್ಥಾಪಿಸಲ್ಪಟ್ಟ ಸೊಸೈಟಿಗಳು
ಮತ್ತು ಶೇ 51 ಅಥವಾ ಅದಕ್ಕೂ ಹೆಚ್ಚಿನ ಪಾಲುದಾರಿಕೆ ಹೊಂದಿರುವ ಸರ್ಕಾರದ ಯಾವುದೇ ಪ್ರಾಧಿಕಾರ ಹಾಗೂ
ನೋಂದಣಿ
ಮೂಲದಲ್ಲಿ ತೆರಿಗೆ ಕಡಿತ ಪ್ರಾಧಿಕಾರಗಳು ಜಿಎಸ್ಟಿ ಕಾಯ್ದೆಯಡಿ ನೋಂದಾವಣೆಗೊಳ್ಳುವುದು ಕಡ್ಡಾಯವಾಗಿದೆ. ನೋಂದಣಿಗಾಗಿ ಆದಾಯ ತೆರಿಗೆ ಇಲಾಖೆಯಿಂದ ಟಿಡಿಎಸ್ ಕೆಲಸಕ್ಕೆಂದೇ ವಿತರಿಸಲಾಗಿರುವ ತೆರಿಗೆ ಕಡಿತ ಮತ್ತು ಸಂಗ್ರಹಣೆ ಖಾತೆ ಸಂಖ್ಯೆ (TAN) ಹೊಂದಿರುವುದು ಅವಶ್ಯ.
ವರ್ತಕರು ಸರಕು-ಸೇವೆಗಳ ಖರೀದಿ- ಮಾರಾಟ ವಹಿವಾಟು ನಡೆಸುವಂತೆ ಈ ಪ್ರಾಧಿಕಾರಗಳು ಸರಕು ಮತ್ತು ಸೇವೆಗಳ ಖರೀದಿ- ಮಾರಾಟ ಮಾಡಬೇಕೆಂದರೆ ತಮ್ಮ ಕಚೇರಿಗೆ ನೀಡಲಾದ ‘ಪ್ಯಾನ್’ ಆಧರಿಸಿ ಪ್ರತ್ಯೇಕ ನೋಂದಣಿ ಪಡೆಯುವುದು ಅವಶ್ಯಕ. www.gst.gov.in ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಅರ್ಜಿಯಲ್ಲಿ ಕಚೇರಿ ಮುಖ್ಯಸ್ಥರ ಪ್ಯಾನ್, ಮೊಬೈಲ್ ಸಂಖ್ಯೆ, ಇ–ಮೇಲ್ ಇತ್ಯಾದಿ ವೈಯಕ್ತಿಕ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಇದಕ್ಕಾಗಿ ಕಚೇರಿ ಮುಖ್ಯಸ್ಥರು ಗಾಬರಿ ಪಡಬೇಕಾಗಿಲ್ಲ. ಬೇರೆ ಕಚೇರಿಗೆ ವರ್ಗಾವಣೆಯಾದ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವ ಮೂಲಕ ವೈಯಕ್ತಿಕ ವಿವರಗಳನ್ನು ತಿದ್ದುಪಡಿ ಹೊಸಬರ ವಿವರಗಳನ್ನು ಸುಲಭವಾಗಿ ಸೇರಿಸಬಹುದು.
ತೆರಿಗೆ ಕಡಿತ
ಹೀಗೆ ನೋಂದಣಿ ಮಾಡಿಕೊಂಡವರು ಅಕ್ಟೋಬರ 1 ರಿಂದ ತೆರಿಗೆ ಕಡಿತ ಮಾಡಬೇಕಾಗುತ್ತದೆ. ಸರಕು-ಸೇವೆಗಳ ಪೂರೈಕೆ ಮೌಲ್ಯವು ಎರಡುವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚಾದಲ್ಲಿ ಪೂರೈಕೆದಾರನಿಗೆ (ಸಾಮಾನ್ಯವಾಗಿ ಗುತ್ತಿಗೆದಾರನಿಗೆ) ನೀಡಲಾಗುವ ಬಿಲ್ನಲ್ಲಿ ಶೇ 2 ರಷ್ಟು ತೆರಿಗೆ (ಶೇ 1 ಕೆಜಿಎಸ್ಟಿ ಮತ್ತು ಶೇ 1 ಸಿ-ಜಿಎಸ್ಟಿ) ಕಡಿತ ಮಾಡಬೇಕಾಗುತ್ತದೆ.
ಉದಾಹರಣೆಗೆ
* ಪ್ರಾಧಿಕಾರದ ಹೆಸರು: ಗ್ರಾಂ ಪಂ ಕೆಂಗಲಗುತ್ತಿ
* ಪೂರೈಕೆಯ ಹೆಸರು: ರಸ್ತೆ ನಿರ್ಮಾಣ ಕಾಮಗಾರಿ
* ಕರಾರು ಒಪ್ಪಂದದ ಮೌಲ್ಯ (ಗುತ್ತಿಗೆ ಮೌಲ್ಯ): ₹ 5 ಲಕ್ಷ
* ಕಡಿತ ಮಾಡಬೇಕಾದ ತೆರಿಗೆ ಶೇ 2 ರಷ್ಟು: ₹ 10,000 (₹ 5,000+ ₹ 5,000)
ತೆರಿಗೆ ಕಡಿತ ಮಾಡುವಾಗ ಬಿಲ್ ಮೊತ್ ₹ ತ 5 ಲಕ್ಷವೇ ಇರಬೇಕೆಂದಿಲ್ಲ. ಒಂದು ವೇಳೆ ಈ ಒಟ್ಟು ಮೊತ್ತವನ್ನು ಬೇರೆ ಬೇರೆ ಕಂತುಗಳಲ್ಲಿ ನೀಡುವಾಗ ಬಿಲ್ಲಿನ ಮೊತ್ತ ₹ 2.5 ಲಕ್ಷಕ್ಕಿಂತ ಕಡಿಮೆಯಿದ್ದರೂ ಕಡಿತ ಕಡ್ಡಾಯ. ಕಡಿತ ಮಾಡುವ ಒಟ್ಠು ಮೊತ್ತ ಕರಾರು ಒಪ್ಪಂದದ ಒಟ್ಟು ಮೌಲ್ಯಕ್ಕೆ ಶೇ 2ರಷ್ಟಾಗಬೇಕು. ಶೇ 2ಕ್ಕಿಂತ ಕಡಿಮೆ ಕಡಿತ ಮಾಡುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೇನೆಂದರೆ ಗುತ್ತಿಗೆದಾರ (ಪೂರೈಕೆದಾರ) ಸಲ್ಲಿಸುವ ತೆರಿಗೆ ಬೆಲೆಪಟ್ಟಿಯಲ್ಲಿ ನಮೂದಿಸಿರುವ ಕೇಂದ್ರ ತೆರಿಗೆ (ಸಿ-ಜಿಎಸ್ಟಿ),ರಾಜ್ಯ ತೆರಿಗೆ (ಕೆ-ಜಿಎಸ್ಟಿ), ಸಮಗ್ರ ತೆರಿಗೆ(ಐ-ಜಿಎಸ್ಟಿ) ಹಾಗೂ ಉಪಕರ (ಸೆಸ್)-ಈ ತೆರಿಗೆಗಳನ್ನು ಹೊರತುಪಡಿಸಿ ಕೇವಲ ಸರಕು ಸೇವೆಗಳ ಪೂರೈಕೆ ಮೌಲ್ಯದ ಮೇಲೆ ಮಾತ್ರ ಶೇ 2 ರಷ್ಟು ತೆರಿಗೆ ಕಡಿತ ಮಾಡಬೇಕು.
ಇವರಿಂದ ಕಡಿತ ಮಾಡುವಂತಿಲ್ಲ
ಸರಕು ಅಥವಾ ಸೇವೆಗಳು ಸಂಪೂರ್ಣ ತೆರಿಗೆ ವಿನಾಯ್ತಿಗೆ ಒಳಪಟ್ಟಿದ್ದರೆ. ಕರಾರು ಒಪ್ಪಂದವೊಂದರ ಮೌಲ್ಯ ₹ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಮತ್ತು ಪೂರೈಕೆದಾರನ (ಸಾಮಾನ್ಯವಾಗಿ ಗುತ್ತಿಗೆದಾರ) ಸ್ಥಾನ ಮತ್ತು ಪೂರೈಕೆ ಸ್ಥಳ (ಗುತ್ತಿಗೆದಾರ ಕೆಲಸ ಮಾಡಿದ ಸ್ಥಳ) ಒಂದು ರಾಜ್ಯದಲ್ಲಿದ್ದು ಈ ಪೂರೈಕೆಯನ್ನು ಸ್ವೀಕರಿಸುವವನು (ಟಿಡಿಎಸ್ ಪ್ರಾಧಿಕಾರ) ನೋಂದಾಯಿತನಾಗಿರುವ ರಾಜ್ಯ ಭಿನ್ನವಾಗಿದ್ದರೆ ಅಂಥ ಪೂರೈಕೆಯ ಸಮಯದಲ್ಲಿ ಪ್ರಾಧಿಕಾರಗಳು ತೆರಿಗೆ ಕಡಿತ ಮಾಡುವಂತಿಲ್ಲ.
ರಿಟರ್ನ್ ಸಲ್ಲಿಕೆ
ಪ್ರತಿಯೊಬ್ಬ ನೋಂದಾಯಿತ ಕಡಿತದಾರ (ಟಿಡಿಎಸ್ ಪ್ರಾಧಿಕಾರ) ಕಡಿತ ಮಾಡಿದ ತೆರಿಗೆಯನ್ನು ಮುಂದಿನ ತಿಂಗಳ ಹತ್ತನೇ ದಿನಗಳಲ್ಲಿ ಸರ್ಕಾರಕ್ಕೆ ಸಂದಾಯ ಮಾಡಬೇಕು. ಯಾವ ಗುತ್ತಿಗೆದಾರನಿಂದ, ಎಷ್ಟು ಕಡಿತ ಮಾಡಲಾಗಿದೆ-ಇತ್ಯಾದಿ ವಿವರಗಳನ್ನೊಳಗೊಂಡ ಒಂದು ರಿಟರ್ನ ಅನ್ನು ನಮೂನೆ ಜಿಎಸ್ಟಿಆರ್-07 ರಲ್ಲಿ 10 ನೇ ತಾರೀಕಿನ ಒಳಗೆ www.gst.gov.in ಜಾಲತಾಣದಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.
ಮೂಲದಲ್ಲಿಯೇ ತೆರಿಗೆ ಕಡಿತ ಪ್ರಾಧಿಕಾರ ಈ ರಿಟರ್ನ್ ಸಲ್ಲಿಸಿದ ನಂತರ ಗುತ್ತಿಗೆದಾರರಿಗೆ (ಕಡಿತ ಒಳಗಾದವರಿಗೆ) ಅವರ ಕಡಿತದ ವಿವರಗಳು ಅವರ ನಮೂನೆ ‘ಜಿಎಸ್ಟಿಆರ್-2ಎ’ ದಲ್ಲಿ ಭಾಗ-ಸಿ ಅಥವಾ ನಮೂನೆ ‘ಜಿಎಸ್ಟಿಆರ್-4ಎ’ ದಲ್ಲಿ ಕಾಣಸಿಗುತ್ತವೆ. ಈ ಅಂಕಿ-ಅಂಶಗಳನ್ನಾಧರಿಸಿ ಅವರು ತಮ್ಮ ರಿಟರ್ನಗಳನ್ನು ಸಲ್ಲಿಸಬಹುದು.
ನಿಲ್ ರಿಟರ್ನ ಸಲ್ಲಿಕೆ ಅಗತ್ಯ ಇಲ್ಲ
ಆಯಾ ತಿಂಗಳಲ್ಲಿ ಯಾವುದೇ ತೆರಿಗೆಯನ್ನು ಕಡಿತ ಮಾಡದಿದ್ದರೆ ಪ್ರಸ್ತುತ ನಿಯಮಾನುಸಾರ ಕಡಿತದಾರರು ನಮೂನೆ ‘ಜಿಎಸ್ಟಿಆರ್-7’ ರಲ್ಲಿ ಸಲ್ಲಿಸಬೇಕಾದ ರಿಟರ್ನ ಸಲ್ಲಿಸುವ ಅವಶ್ಯಕತೆಯಿಲ್ಲ. ತೆರಿಗೆ ಬಾಧ್ಯತೆ ಇದ್ದಾಗ ಮಾತ್ರ ರಿಟರ್ನ ಸಲ್ಲಿಸಿದರೆ ಸಾಕು.
ಕಡಿತದ ಪ್ರಮಾಣ ಪತ್ರ
ಕಡಿತದಾರನು (ಡಿಡಕ್ಟರ್) ರಿಟರ್ನ ಸಲ್ಲಿಸಲು ಇರುವ ಗಡುವು ದಿನಾಂಕದ ನಂತರದ ಐದು ದಿನಗಳಲ್ಲಿ (ಅಂದರೆ 15 ನೇ ತಾರೀಕಿನೊಳಗೆ) ನಮೂನೆ ಜಿಎಸ್ಟಿಆರ್-7ಎ ದಲ್ಲಿ ಒಂದು ಪ್ರಮಾಣಪತ್ರವನ್ನು ಅಂತರ್ಜಾಲದಲ್ಲಿ ತೆರಿಗೆ ಕಡಿತಕ್ಕೆ ಒಳಗಾದವನಿಗೆ ಒದಗಿಸುವುದು ಕಡ್ಡಾಯವಾಗಿದೆ.
ತೆರಿಗೆ ಸಂದಾಯ
ಕಡಿತ ಮಾಡಿದ ತೆರಿಗೆಯನ್ನು ಮುಂದಿನ ತಿಂಗಳ 10 ನೇ ದಿನದೊಳಗಾಗಿ ಸರ್ಕಾರಕ್ಕೆ ಸಂದಾಯ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. www.gst.gov.in ಜಾಲತಾಣದಲ್ಲಿ ಚಲನ್ ಮೂಲಕ ಎನ್ಇಎಫ್ಟಿ / ಆರ್ಟಿಜಿಎಸ್ ಪಾವತಿ ವಿಧಾನದಲ್ಲಿ ತೆರಿಗೆ ಸಂದಾಯ ಮಾಡಬೇಕು. ಪ್ರತಿ ಚಲನ್ಗೆ ಒಂದು ಸಂಖ್ಯೆ (CPIN) ದೊರೆಯುತ್ತದೆ. ಈ ಸಂಖ್ಯೆ ಮತ್ತು ಚಲನ್ 15 ದಿನಗಳ ಕಾಲ ಮಾತ್ರ ಚಾಲ್ತಿಯಲ್ಲಿ ಇರಲಿದೆ. ಅಷ್ಟರಲ್ಲಿ ಬ್ಯಾಂಕ್ ಮತ್ತು ಖಜಾನೆ ಮೂಲಕ ತೆರಿಗೆ ಸಂದಾಯ ಮಾಡಬೇಕು.
ಕಾಯ್ದೆ ಉಲ್ಲಂಘನೆಗೆ ದಂಡ
ಕಡಿತ ಮಾಡಿದ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಸರ್ಕಾರಕ್ಕೆ ಸಂದಾಯ ಮಾಡಲು ವಿಫಲಗೊಂಡರೆ ಅಥವಾ ತೆರಿಗೆಯನ್ನು ಕಡಿತ ಮಾಡಲು ವಿಫಲನಾದಲ್ಲಿ ಅಥವಾ ಕಡಿತ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆ ಕಡಿತ ಮಾಡಿದಲ್ಲಿ ₹ 20,000 (₹ 10,000+ ₹10,000) ದಂಡ ಅಥವಾ ಕಡಿತ ಮಾಡದ ಅಥವಾ ಕಡಿಮೆ ಕಡಿತ ಮಾಡಿದ ಇಲ್ಲವೆ ಕಡಿತ ಮಾಡಿದ ಆದರೆ ಸರ್ಕಾರಕ್ಕೆ ಸಂದಾಯ ಮಾಡದ ತೆರಿಗೆ-ಇವುಗಳಲ್ಲಿ ಯಾವುದು ಹೆಚ್ಚೊ ಆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ನಿಗದಿತ ಅವಧಿಯಲ್ಲಿ ನಮೂನೆ ‘ಜಿಎಸ್ಟಿಆರ್-7ಎ’ ದಲ್ಲಿ ಕಡಿತದ ಪ್ರಮಾಣ ಪತ್ರವನ್ನು ಒದಗಿಸುವಲ್ಲಿ ವಿಫಲಗೊಂಡ ಪ್ರಾಧಿಕಾರವು ತಡವಾದ ಪ್ರತಿ ದಿನಕ್ಕೆ ₹ 200 ರಂತೆ (₹ 100+ ₹ 100) ಗರಿಷ್ಠ ₹ 10,000 ದಂಡ ಪಾವತಿಸಬೇಕಾಗುತ್ತದೆ. ವಿಳಂಬವಾಗಿ ಸಂದಾಯ ಮಾಡಿದ ತೆರಿಗೆಗೆ ವಾರ್ಷಿಕ ಶೇ 18ರಷ್ಟು ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ.
ಕರ್ನಾಟಕದಲ್ಲಿ ಈಗಾಗಲೇ ಟಿಡಿಎಸ್ ಜಾರಿಗೆ ತರಲು ಅವಶ್ಯಕವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟಿಡಿಎಸ್ ಪ್ರಾಧಿಕಾರಗಳ ನೋಂದಣಿ ಕಾರ್ಯ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.
ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಈ ಪ್ರಕ್ರಿಯೆ ಬಗ್ಗೆ ಸಮಗ್ರ ಸ್ವರೂಪದ ತರಬೇತಿ ನೀಡಲಾಗಿದೆ. ಈಗ ಎಲ್ಲ ಟಿಡಿಎಸ್ ಪ್ರಾಧಿಕಾರಗಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಎಲ್ಲ ಪ್ರಾಧಿಕಾರಗಳು ಸಪ್ಟೆಂಬರ್ ಅಂತ್ಯದೊಳಗೆ ನೋಂದಣಿ ಪಡೆದುಕೊಂಡು ಇದೇ ಅಕ್ಟೋಬರ 1 ರಿಂದ ತೆರಿಗೆ ಕಡಿತ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ಕಾಯ್ದೆ ಉಲ್ಲಂಘನೆಗೆ ದಂಡ
ಕಡಿತ ಮಾಡಿದ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಸರ್ಕಾರಕ್ಕೆ ಸಂದಾಯ ಮಾಡಲು ವಿಫಲಗೊಂಡರೆ ಅಥವಾ ತೆರಿಗೆಯನ್ನು ಕಡಿತ ಮಾಡಲು ವಿಫಲನಾದಲ್ಲಿ ಅಥವಾ ಕಡಿತ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆ ಕಡಿತ ಮಾಡಿದಲ್ಲಿ ₹ 20,000 (₹ 10,000+ ₹10,000) ದಂಡ ಅಥವಾ ಕಡಿತ ಮಾಡದ ಅಥವಾ ಕಡಿಮೆ ಕಡಿತ ಮಾಡಿದ ಇಲ್ಲವೆ ಕಡಿತ ಮಾಡಿದ ಆದರೆ ಸರ್ಕಾರಕ್ಕೆ ಸಂದಾಯ ಮಾಡದ ತೆರಿಗೆ-ಇವುಗಳಲ್ಲಿ ಯಾವುದು ಹೆಚ್ಚೊ ಆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ನಿಗದಿತ ಅವಧಿಯಲ್ಲಿ ನಮೂನೆ ‘ಜಿಎಸ್ಟಿಆರ್-7ಎ’ ದಲ್ಲಿ ಕಡಿತದ ಪ್ರಮಾಣ ಪತ್ರವನ್ನು ಒದಗಿಸುವಲ್ಲಿ ವಿಫಲಗೊಂಡ ಪ್ರಾಧಿಕಾರವು ತಡವಾದ ಪ್ರತಿ ದಿನಕ್ಕೆ ₹ 200 ರಂತೆ (₹ 100+ ₹ 100) ಗರಿಷ್ಠ ₹ 10,000 ದಂಡ ಪಾವತಿಸಬೇಕಾಗುತ್ತದೆ. ವಿಳಂಬವಾಗಿ ಸಂದಾಯ ಮಾಡಿದ ತೆರಿಗೆಗೆ ವಾರ್ಷಿಕಶೇ 18ರಷ್ಟು ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ.
ಕರ್ನಾಟಕದಲ್ಲಿ ಈಗಾಗಲೇ ಟಿಡಿಎಸ್ ಜಾರಿಗೆ ತರಲು ಅವಶ್ಯಕವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟಿಡಿಎಸ್ ಪ್ರಾಧಿಕಾರಗಳ ನೋಂದಣಿ ಕಾರ್ಯ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.
ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಈ ಪ್ರಕ್ರಿಯೆ ಬಗ್ಗೆ ಸಮಗ್ರ ಸ್ವರೂಪದ ತರಬೇತಿ ನೀಡಲಾಗಿದೆ. ಈಗ ಎಲ್ಲ ಟಿಡಿಎಸ್ ಪ್ರಾಧಿಕಾರಗಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಎಲ್ಲ ಪ್ರಾಧಿಕಾರಗಳು ಸಪ್ಟೆಂಬರ್ ಅಂತ್ಯದೊಳಗೆ ನೋಂದಣಿ ಪಡೆದುಕೊಂಡು ಇದೇ ಅಕ್ಟೋಬರ 1 ರಿಂದ ತೆರಿಗೆ ಕಡಿತ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.