ಮಂಗಳೂರು: ‘ದೇಶದ ಪ್ರಮುಖ ವಾಣಿಜ್ಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್, ನಿರಂತರವಾಗಿ ಆರ್ಥಿಕ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ’ ಎಂದು ಬ್ಯಾಂಕಿನ ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ನಗರದ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಬ್ಯಾಂಕ್ ನಿವ್ವಳ ಲಾಭ ಗಳಿಸಿದೆ. ಮೊದಲ ತ್ರೈಮಾಸಿಕದಲ್ಲಿ ₹163 ಕೋಟಿ, ದ್ವಿತೀಯ ತ್ರೈಮಾಸಿಕದಲ್ಲಿ ₹118 ಕೋಟಿ ಹಾಗೂ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತೃತೀಯ ತ್ರೈಮಾಸಿಕದಲ್ಲಿ ₹140 ಕೋಟಿ ಲಾಭ ಗಳಿಸಿದೆ’ ಎಂದು ತಿಳಿಸಿದರು.
‘1 ಕೋಟಿ ಗ್ರಾಹಕರನ್ನು ಹೊಂದಿರುವ ಬ್ಯಾಂಕ್, ₹1,17,102 ಕೋಟಿ ವ್ಯವಹಾರ ನಡೆಸುವ ಮೂಲಕ ಈ ವರ್ಷ ಹೊಸ ದಾಖಲೆ ಮಾಡಿದೆ. 835 ಶಾಖೆಗಳು, 300 ಕ್ಕೂ ಹೆಚ್ಚು ಇ–ಲಾಬಿಗಳನ್ನು ಹೊಂದಿದೆ.
‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸಲಾಗುತ್ತಿದೆ. ಹಲವು ಕಂಪನಿಗಳ ಸಹಭಾಗಿತ್ವದಲ್ಲಿ ವಿವಿಧ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯಡಿ ₹29.84 ಕೋಟಿ ವೆಚ್ಚದಲ್ಲಿ 917 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.
ಸಂಸ್ಥಾಪಕರ ದಿನದ ಅಂಗವಾಗಿ ಪ್ರಸನ್ನ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಸುಖಬೋಧಾನಂದಜಿ, ‘ಜೀವನವನ್ನು ಆಚರಿಸಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನಿಂದ ವಿವಿಧ ಸಂಸ್ಥೆಗಳಿಗೆ ಆರ್ಥಿಕ ನೆರವಿನ ಪತ್ರ ಹಸ್ತಾಂತರಿಸಲಾಯಿತು.