ನವದೆಹಲಿ: ‘ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ (ಪಿಎಂ–ಕಿಸಾನ್) ಯೋಜನೆಯಡಿ ಇಲ್ಲಿಯವರೆಗೆ ದೇಶದ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ₹3 ಲಕ್ಷ ಕೋಟಿ ಪಾವತಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
2018ರ ಡಿಸೆಂಬರ್ 1ರಂದು ಕೇಂದ್ರ ಸರ್ಕಾರವು ಈ ಯೋಜನೆಗೆ ಚಾಲನೆ ನೀಡಿತ್ತು. ಇದರಡಿ ವಾರ್ಷಿಕವಾಗಿ ಒಟ್ಟು ₹6 ಸಾವಿರ ಮೊತ್ತವನ್ನು ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ.
‘ರೈತರ ಶ್ರೇಯೋಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬದ್ಧವಾಗಿದೆ. ಈ ಯೋಜನೆಯಡಿ ದೇಶದ 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ₹21 ಸಾವಿರ ಕೋಟಿ ಮೊತ್ತವನ್ನು (16ನೇ ಕಂತು) ವರ್ಗಾಯಿಸಲಾಗಿದೆ’ ಎಂದು ‘ಎಕ್ಸ್’ನಲ್ಲಿ ಬುಧವಾರ ಸಚಿವರು ತಿಳಿಸಿದ್ದಾರೆ.
‘ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಅನ್ನದಾತರ ಬದುಕನ್ನು ಹಸನುಗೊಳಿಸುವುದೇ ಈ ಯೋಜನೆಯ ಗುರಿಯಾಗಿದೆ’ ಎಂದು ಹೇಳಿದ್ದಾರೆ.