ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ ಒಂದು ಪಡಿತರ: ಹೆಚ್ಚುವರಿ ಸಾಲಕ್ಕೆ ಅನುಮತಿ

Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಇದುವರೆಗೆ ಒಂಬತ್ತು ರಾಜ್ಯಗಳು ಪೂರ್ಣಗೊಳಿಸಿದ್ದು, ಈ ರಾಜ್ಯಗಳಿಗೆ ಒಟ್ಟು ₹ 23,523 ಕೋಟಿಯನ್ನು ಹೆಚ್ಚುವರಿಯಾಗಿ ಸಾಲವಾಗಿ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಒಂಬತ್ತು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು.

ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಈ ಸುಧಾರಣೆಯನ್ನು ಪೂರ್ಣಗೊಳಿಸಿರುವ ಇತರ ರಾಜ್ಯಗಳು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೆಚ್ಚು ವರಿಯಾಗಿ ₹ 4,509 ಕೋಟಿ ಯನ್ನು ಸಾಲವಾಗಿ ಪಡೆಯಲು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.

ಹೆಚ್ಚುವರಿ ಸಾಲ ಪಡೆಯಲು ಅರ್ಹತೆ ಗಳಿಸಬೇಕು ಎಂದಾದರೆ ರಾಜ್ಯ ಗಳು ಡಿಸೆಂಬರ್‌ 31ಕ್ಕೆ ಮೊದಲು ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ನಿಗದಿತ ದಿನದೊಳಗೆ ಹಲವು ರಾಜ್ಯಗಳು ಈ ಸುಧಾರಣೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ‘ಒಂದು ದೇಶ ಒಂದು ಪಡಿತರ ಚೀಟಿ’ ಸುಧಾರಣೆ ಮಾತ್ರವೇ ಅಲ್ಲದೆ, ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಸುಲಲಿತ ವಾಣಿಜ್ಯ ವಹಿವಾಟು ಸುಧಾರಣೆ, ಇಂಧನ ವಲಯದಲ್ಲಿ ಸುಧಾರಣೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ಸುಧಾರಣೆಗಳನ್ನೂ ಜಾರಿಗೆ ತರಬಹುದು.

ಕೋವಿಡ್‌–19 ಸಾಂಕ್ರಾಮಿಕದ ಆರ್ಥಿಕ ಪರಿಣಾಮ ನಿಭಾಯಿಸಲು ಕೇಂದ್ರವು ರಾಜ್ಯಗಳಿಗೆ ಜಿಎಸ್‌ಡಿಪಿಯ (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ಶೇಕಡ 2ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸಾಲವಾಗಿ ಪಡೆಯಲು ಅವಕಾಶ ನೀಡಿದೆ. ಆದರೆ, ಸಾಲದ ಕಾರಣದಿಂದಾಗಿ ಭವಿಷ್ಯದಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರಾಜ್ಯಗಳು ನಾಗರಿಕರಿಗೆ ಒದಗಿಸುವ ಕೆಲವು ಸೇವೆಗಳಲ್ಲಿ ಸುಧಾರಣೆ ತಂದರೆ ಮಾತ್ರ ಸಾಲ ಮಾಡಬಹುದು ಎಂಬ ನಿಯಮ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT