ಚೆನ್ನೈ: ಕೇಂದ್ರ ಸರ್ಕಾರವು ಮಾರಾಟಕ್ಕೆ ಮುಕ್ತವಾಗಿಸಿರುವ 67 ಕಲ್ಲಿದ್ದಲು ಗಣಿಗಳ ಪೈಕಿ 48 ಗಣಿಗಳ ಖರೀದಿಗೆ ಯಾರೂ ಬಿಡ್ ಸಲ್ಲಿಸಿಲ್ಲ. ಲಾಭದ ಪ್ರಮಾಣ ಕಡಿಮೆ ಇರುವ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಆಸಕ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ.
ವಿಶ್ವದಲ್ಲಿನ ನಾಲ್ಕನೆಯ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪ ಭಾರತದಲ್ಲಿ ಇದೆ. ಕಲ್ಲಿದ್ದಲು ಆಮದು, ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿ ಇದೆ.
ಕಲ್ಲಿದ್ದಲು ಗಣಿಗಾರಿಕೆಗೆ ತಾಂತ್ರಿಕ ಬಿಡ್ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿತ್ತು. 67 ಗಣಿಗಳ ಪೈಕಿ 19 ಗಣಿಗಳ ಖರೀದಿಗೆ ಮಾತ್ರ ಬಿಡ್ ಸಲ್ಲಿಕೆಯಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ. ಎಂಟು ಗಣಿಗಳಿಗೆ ಮಾತ್ರ ಒಂದಕ್ಕಿಂತ ಹೆಚ್ಚು ಬಿಡ್ ಸಲ್ಲಿಕೆಯಾಗಿದೆ.