ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ: ₹100ರ ಗಡಿ ದಾಟುವ ಸಂಭವ

ರಾಜ್ಯದಲ್ಲಿ ಮಳೆ ಕೊರತೆ, ಬೆಳೆ ಹಾನಿ; ಬೇಡಿಕೆಯಷ್ಟು ಆಗದ ಪೂರೈಕೆ
Published 27 ಅಕ್ಟೋಬರ್ 2023, 23:30 IST
Last Updated 27 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರಿಕೆ ಕಾಣುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿಗೆ ಗರಿಷ್ಠ ₹70ರಂತೆ ಮಾರಾಟ ಆಗುತ್ತಿದ್ದು, ಪೂರೈಕೆ ಸುಧಾರಿಸದೇ ಇದ್ದರೆ ಕೆ.ಜಿಗೆ ₹100ರ ಗಡಿ ದಾಟುವ ಸಾಧ್ಯತೆ ಇದೆ.

ಮಳೆ ಕೊರತೆಯಿಂದಾಗಿ ಹಲವೆಡೆ ಇಳುವರಿ ತಗ್ಗಿದರೆ, ಇನ್ನೂ ಕೆಲವು ಭಾಗಗಳಲ್ಲಿ ಬೆಳೆ ನಾಶವಾಗಿದೆ. ಆದರೆ ಬೇಡಿಕೆ ಮಾತ್ರ ಹೆಚ್ಚಾಗುತ್ತಿದೆ. ಈ ಕಾರಣಗಳಿಂದಾಗಿ ಈರುಳ್ಳಿ ದರದಲ್ಲಿ ಏರಿಕೆ ಕಾಣುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು, ವ್ಯಾಪಾರಿಗಳು ಹೇಳುತ್ತಿದ್ದಾರೆ.

10 ದಿನಗಳಿಂದಲೂ ಬೆಲೆ ಏರಿಕೆ ಕಾಣುತ್ತಿದೆ. ದೊಡ್ಡ ಗಾತ್ರದ ಈರುಳ್ಳಿಯ ಸಗಟು ದರವು ಶುಕ್ರವಾರ ಕ್ವಿಂಟಲ್‌ಗೆ ₹ 5,800 ರಿಂದ ₹6 ಸಾವಿರದವರೆಗೆ ಆಗಿದೆ ಎಂದು ಯಶವಂತಪುರದಲ್ಲಿ ಸಗಟು ವ್ಯಾಪಾರ ನಡೆಸುವ ಬಾಬುರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಆಗದಿರುವುದೇ ಈರುಳ್ಳಿ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನುತ್ತಾರೆ ಯಶವಂತಪುರದ ಮಹೇಶ್‌ ಟ್ರೇಡಿಂಗ್ ಆ್ಯಂಡ್ ಕಂಪನಿಯ ವೈಶಾಖ್‌. ರಾಜ್ಯದಲ್ಲಿಯೂ ಹೊಸ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಮಹಾರಾಷ್ಟ್ರದಿಂದ ಪೂರೈಕೆ ಕಡಿಮೆ ಆಗಿದೆ. ಪೂರೈಕೆ ಸ್ಥಿತಿ ಸುಧಾರಿಸದೇ ಇದ್ದರೆ ದೀಪಾವಳಿ ವೇಳೆಗೆ ಕೆ.ಜಿಗೆ ₹100ನ್ನು ದಾಟುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಯಶವಂತಪುರ ಎಪಿಎಂಸಿಗೆ ಕಳೆದ ತಿಂಗಳು ದಿನಕ್ಕೆ ಸರಾಸರಿ 70–75 ಸಾವಿರ ಚೀಲ ಈರುಳ್ಳಿ ಬಂದಿತ್ತು. ಆದರೆ ಈ ತಿಂಗಳು ಸರಾಸರಿ 40–50 ಸಾವಿರ ಚೀಲ ಮಾತ್ರ ಬರುತ್ತಿದೆ ಎನ್ನುತ್ತಾರೆ ಸಗಟು ವ್ಯಾಪಾರಿ ಲೋಕಪ್ಪ ಜಿ.

ಕ್ವಿಂಟಲ್‌ಗೆ ₹4800ರಂತೆ 60 ಕ್ವಿಂಟಲ್‌ ಈರುಳ್ಳಿಯನ್ನು ಶುಕ್ರವಾರ ಮಾರಾಟ ಮಾಡಿದ್ದೇನೆ. ಕಳೆದ 4 ವರ್ಷದಿಂದ ಉತ್ತಮ ಬೆಲೆ ಇರಲಿಲ್ಲ. ಈಗ ಬೆಲೆ ಹೆಚ್ಚಾಗಿರುವುದರಿಂದ ಅನುಕೂಲ ಆಯಿತು ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆಯ ರೈತ ಕೊಟ್ರೇಶ್‌.

ಉಡುಪಿ ಜಿಲ್ಲೆಯಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರವು ಬುಧವಾರ ಕೆ.ಜಿಗೆ ₹45 ಇದ್ದಿದ್ದು ಶುಕ್ರವಾರ ಕೆ.ಜಿಗೆ ₹70ಕ್ಕೆ ಏರಿಕೆ ಕಂಡಿದೆ. ಮಂಗಳೂರಲ್ಲಿ ಚಿಲ್ಲರೆ ದರ ಕೆ.ಜಿಗೆ ₹60ರಿಂದ ₹65ರವರೆಗೆ ಮಾರಾಟ ಆಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ಮತ್ತು ತರೀಕೆರೆ ಭಾಗದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ‌. 10,950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ 6,214 ಹೆಕ್ಟೇರ್‌ನಲ್ಲಿ ಮಾತ್ರ ಬೆಳೆಯಲು ಸಾಧ್ಯವಾಗಿದೆ. ಇಳುವರಿ ಕೂಡ ಕುಂಠಿತವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಗಟು ದರ ಕ್ವಿಂಟಲ್‌ಗೆ ದಪ್ಪ ಈರುಳ್ಳಿ ₹4,000 ತನಕ ಇದೆ. 

ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಈರುಳ್ಳಿ – ಪ್ರಜಾವಾಣಿ ಚಿತ್ರ
ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಈರುಳ್ಳಿ – ಪ್ರಜಾವಾಣಿ ಚಿತ್ರ

ತಗ್ಗಿದ ಆವಕ; ಏರಿದ ದರ 

ಹುಬ್ಬಳ್ಳಿ: ಧಾರವಾಡ ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ದರ ಕೆಜಿಗೆ ₹ 60 ರಿಂದ ₹ 70ಕ್ಕೆ ಏರಿಕೆಯಾಗಿದೆ. ಗದಗ ಹಾವೇರಿ ಬಾಗಲಕೋಟೆ ಹುಬ್ಬಳ್ಳಿ ಸೇರಿ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಈರುಳ್ಳಿಯ ಆವಕದ ಪ್ರಮಾಣ ಕಡಿಮೆಯಾಗಿದೆ. ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಎರಡು ವರ್ಷಗಳಿಂದ ಈರುಳ್ಳಿ ದರದಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಾರದ ಹಿನ್ನೆಲೆಯಲ್ಲಿ ಬಹುತೇಕ ರೈತರು ಪರ್ಯಾಯ ಬೆಳೆಯ ಮೊರೆ ಹೋಗಿದ್ದಾರೆ. ಹುಬ್ಬಳ್ಳಿಯಲ್ಲಿ 15 ದಿನದ ಹಿಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕ್ವಿಂಟಲ್‌ಗೆ ಸರಾಸರಿ ₹3 ಸಾವಿರ ಇದ್ದ ಈರುಳ್ಳಿ ದರ ಈಗ ₹6 ಸಾವಿರದ ಗಡಿ ದಾಟಿದೆ.  ‘ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 6799 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗುರಿಯಿತ್ತು. ಮಳೆ ಕೊರತೆಯಿಂದ 6126 ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿದ್ದು ₹85 ಕೋಟಿ ನಷ್ಟವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. ಬೆಳೆ ಕಡಿಮೆ ಬೇಡಿಕೆ ಜಾಸ್ತಿ: ‘ನವಲಗುಂದ ಭಾಗದಿಂದ ಈ ಸಮಯಕ್ಕೆ ಅತಿಹೆಚ್ಚು ಈರುಳ್ಳಿ ಪೂರೈಕೆ ಆಗಬೇಕಿತ್ತು. ಮುಂಗಾರು ತಡವಾದ ಹಾಗೂ ಆ ಭಾಗದ ರೈತರು ಪರ್ಯಾಯ ಬೆಳೆ ಬೆಳೆದ ಕಾರಣ ಅಲ್ಲಿಂದಲೂ ಬರುತ್ತಿಲ್ಲ. ಧಾರವಾಡ ಜಿಲ್ಲೆ ಗ್ರಾಹಕರಿಗೆ ಪ್ರತಿದಿನ 15 ಲಾರಿಯಷ್ಟು ಈರುಳ್ಳಿ ಬೇಕು. ಅಷ್ಟು ಸಹ ಪೂರೈಸಲು ಸಾಧ್ಯವಾಗುತ್ತಿಲ್ಲ. ಬೆಳೆ ಕಡಿಮೆಯಿದೆ. ಬೇಡಿಕೆ ಹೆಚ್ಚಿದೆ’ ಎಂದು ಈರುಳ್ಳಿ ವ್ಯಾಪಾರಸ್ಥ ಅಸ್ಲಮ್‌ ರಾಯಚೂರು ಹೇಳಿದರು. ‘ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 15 ದಿನಗಳಲ್ಲಿ ಈರುಳ್ಳಿ ಒಂದು ಕ್ವಿಂಟಲ್‌ಗೆ ₹8 ಸಾವಿರದಿಂದ ₹ 9 ಸಾವಿರಕ್ಕೆ ಏರಿಕೆಯಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 100 ರಿಂದ ₹120ಕ್ಕೆ ಏರಿಕೆಯಾಗಬಹುದು’ ಎಂದು ಮಹಾವೀರ ಟ್ರೇಡರ್ಸ್ ಮಾಲೀಕ ಮಹಾವೀರ ಪಾಟೀಲ ಹೇಳಿದರು. ‘ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತಿಂಗಳ ಹಿಂದೆ ಕ್ವಿಂಟಲ್‌ಗೆ ₹ 2500 ಇತ್ತು. ಈಗ ಸರಾಸರಿ ₹5500ಕ್ಕೆ ಮಾರಾಟವಾಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ವಾರಕ್ಕೆ 40 ಸಾವಿರ ಕ್ವಿಂಟಲ್ ಈರುಳ್ಳಿ ಆವಕವಾಗುತ್ತಿತ್ತು. ಈಗ 30 ಸಾವಿರ ಕ್ವಿಂಟಾಲ್ ಆವಕವಾಗಿದೆ’ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು. ಮಳೆ ಕೊರತೆ ಫಸಲು ನಾಶ: ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆ ಹಾಳಾಗಿ ಫಸಲು ಕಡಿಮೆ ಆಗಿರುವುದರಿಂದ ಬೆಲೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 21862 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು 18898 ಹೆಕ್ಟೇರ್‌ನಷ್ಟು ಬೆಳೆ ಹಾಳಾಗಿದೆ. ಇದರಿಂದ ರೈತರಿಗೆ ₹236 ಕೋಟಿ ನಷ್ಟವಾಗಿದೆ. ಎಪಿಎಂಸಿಗೆ ಕಳೆದ ವಾರ 2400 ಚೀಲ ಈರುಳ್ಳಿ ಆವಕವಾಗಿದ್ದು ಪ್ರತಿ ಕ್ವಿಂಟಲ್‌ಗೆ ₹3200 ರಿಂದ ₹ 5500ರವರೆಗೆ ಮಾರಾಟವಾಗುತ್ತಿದೆ.

ಮಳೆ ಕೊರತೆ ಬಿತ್ತನೆ ಇಳುವರಿ ಕುಸಿತ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಇದರಿಂದಾಗಿ ಇಳುವರಿಯೂ ತಗ್ಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 26823 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಅಂದಾಜು 18000  ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆ ಆಗಿದೆ.  ಆಗಸ್ಟ್‌ನಲ್ಲಿ ಏಕಾಏಕಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗೆ ನೀರಿನ ಕೊರತೆ ಉಂಟಾಗಿ ಬೆಳೆ ಕೈ ಸೇರದಂತಾಯಿತು. ಪ್ರತಿ ಹೆಕ್ಟೇರ್‌ಗೆ ನಿರೀಕ್ಷಿತ ಇಳುವರಿ ದೊರೆತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿಗೆ ಶುಕ್ರವಾರ ₹60 ದರ ಇತ್ತು. ಮಹಾರಾಷ್ಟ್ರದಿಂದ ಬಾರದ ದಾಸ್ತಾನು: ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಗ್ರಾಹಕರು ಈರುಳ್ಳಿಗಾಗಿ ಮಹಾರಾಷ್ಟ್ರದ ನಾಸಿಕ್ ಸೋಲಾಪುರ ಅವಲಂಬಿಸಿದ್ದು ಅಲ್ಲಿಂದ ಬೇಡಿಕೆಯಷ್ಟು ಬಾರದ ಕಾರಣ ಕಳೆದ ಎರಡು–ಮೂರು ದಿನಗಳಿಂದ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಕಲಬುರಗಿ ಬೀದರ್ ಯಾದಗಿರಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸರಾಸರಿ ಒಂದು ಕೆ.ಜಿ.ಗೆ ₹ 30 ಇದ್ದ ಈರುಳ್ಳಿ ದರ ಇದೀಗ ₹ 60ಕ್ಕೆ ಮಾರಾಟ ವಾಗುತ್ತಿದೆ. ದೊಡ್ಡ ಗಾತ್ರದ ಈರುಳ್ಳಿ ಬೆಲೆ ಕೆ.ಜಿ.ಗೆ ₹ 80ಕ್ಕೆ ಮಾರಾಟವಾಗುತ್ತಿದೆ. ಕಲಬುರಗಿಯ ಕಣ್ಣಿ ಮಾರ್ಕೆಟ್ ಹಾಗೂ ತಾಜ್‌ ಸುಲ್ತಾನಪುರ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ ಕೆ.ಜಿಗೆ ₹ 30 ರಿಂದ ₹ 40ನಂತೆ ಮಾರಾಟವಾಗಿದ್ದ ಈರುಳ್ಳಿ ಶುಕ್ರವಾರ ಪ್ರತಿ ಕೆ.ಜಿಗೆ ₹ 60ರಿಂದ ₹ 70ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT