ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಎರಡನೇ ಅಲೆ ನಿಯಂತ್ರಿಸಲು ಹೇರಿರುವ ನಿರ್ಬಂಧಗಳಿಂದಾಗಿ ರಿಟೇಲ್ ಉದ್ಯಮ ಸಂಕಷ್ಟಕ್ಕೆ ಒಳಗಾಗಿದ್ದು, ತುರ್ತು ಹಣಕಾಸಿನ ಬೆಂಬಲದ ಅಗತ್ಯ ಇದೆ ಎಂದು ಭಾರತೀಯ ರಿಟೇಲ್ ವರ್ತಕರ ಸಂಘವು (ಆರ್ಎಐ) ಹೇಳಿದೆ.
ದೇಶದ ವಿವಿಧ ಭಾಗಗಳಲ್ಲಿ ಲಾಕ್ಡೌನ್ ಅವಧಿ ವಿಸ್ತರಣೆ ಆಗುತ್ತಿದೆ. ಇದರಿಂದಾಗಿ ರಿಟೇಲ್ ವರ್ತಕರಿಗೆ ಕೆಲಸಗಾರರನ್ನು ಉಳಿಸಿಕೊಳ್ಳುವುದು ಮತ್ತು ವಹಿವಾಟು ನಡೆಸುವುದು ಕಷ್ಟವಾಗುತ್ತಿದೆ. ಉದ್ಯಮಕ್ಕೆ ಬಂಡವಾಳದ ನೆರವು ನೀಡುವ ಅಗತ್ಯ ಇದೆ ಎಂದು ತಿಳಿಸಿದೆ.
ಲಾಕ್ಡೌನ್ನಿಂದ ವಹಿವಾಟು ನಡೆಯದೇ ಇದ್ದರೂ ರಿಟೇಲ್ ವರ್ತಕರು ಕೆಲಸಗಾರರಿಗೆ ಸಂಬಳ ನೀಡಬೇಕು, ವಿದ್ಯುತ್ ಶುಲ್ಕ, ಬಾಡಿಗೆ, ಆಸ್ತಿ ತೆರಿಗೆ ಇತ್ಯಾದಿ ಪಾವತಿಸಬೇಕು. ಉದ್ಯಮದಲ್ಲಿ ನಗದು ಹರಿವು ಸರಾಗವಾಗಿ ಆಗುತ್ತಿಲ್ಲ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ರಿಟೇಲ್ ವಲಯವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳಿಂದ ಈ ಉದ್ಯಮದಲ್ಲಿ ತೊಡಗಿಕೊಂಡವರ ಜೀವನ ನಿರ್ವಹಣೆ ಕಷ್ಟವಾಗಲಿದೆ. ರಿಟೇಲ್ ವರ್ತಕರು ಸಾಲ ಮರುಪಾವತಿಸಲು ಆಗದೇ ಇರುವ ಸ್ಥಿತಿಗೆ ಬಂದರೆ ಹಣಕಾಸು ಸಂಸ್ಥೆಗಳ ಮೇಲೆಯೂ ಪರಿಣಾಮ ಬೀರಲಿದೆ. ರಿಟೇಲ್ ವರ್ತಕರಿಂದ ಎಂಎಸ್ಎಂಇ ವಲಯಕ್ಕೂ ಹಣ ಪಾವತಿ ಆಗುವುದಿಲ್ಲ ಎಂದು ಅದು ಹೇಳಿದೆ.
ಕೊನೆಯ ಹಂತದ ಕೆಲಸಗಾರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವುದು ಮತ್ತು ತುರ್ತಾಗಿ ಹಣಕಾಸಿನ ಬೆಂಬಲ ಒದಗಿಸುವುದರಿಂದ ಮಾತ್ರವೇ ಈ ಉದ್ಯಮವನ್ನು ಕುಸಿಯುವುದರಿಂದ ರಕ್ಷಿಸಲು ಸಾಧ್ಯ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಕುಮಾರ್ ರಾಜಗೋಪಾನ್ ಹೇಳಿದ್ದಾರೆ.