ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಫೆ.3 ರಿಂದ ಆರಂಭವಾಗಲಿರುವ ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಈ ಬಗ್ಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.
ಫೆ.01 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಅದರಿಂದ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರೂ ಸಹ ಆರ್ಬಿಐ ತನ್ನ ಬಡ್ಡಿ ದರಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
'ಹಣಕಾಸು ನೀತಿ ಸಮಿತಿಯು ಯಥಾಸ್ಥಿತಿಯನ್ನು ಮುಂದುವರೆಸಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಹಣದುಬ್ಬರ ದರ ಕುಸಿತವು ಮುಖ್ಯವಾಗಿ ಆಹಾರ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ. ಮೂಲ ಹಣದುಬ್ಬರ ದರವು ಇಳಿದಿಲ್ಲ. ಹೆಚ್ಚುವರಿ ದ್ರವ್ಯತೆಯನ್ನು ನಿರೀಕ್ಷಿಸಬೇಕಿದೆ. ಕೋವಿಡ್ ಲಸಿಕೆಯ ಲಭ್ಯತೆಯು ದೊಡ್ಡ ಆರ್ಥಿಕತೆಯ ಮೇಲೆ ತಕ್ಷಣ ಪರಿಣಾಮ ಬೀರುವುದಿಲ್ಲ' ಎಂದು ಬ್ರಿಕ್ವರ್ಕ್ ರೇಟಿಂಗ್ಸ್ನ ಮುಖ್ಯ ಆರ್ಥಿಕ ಸಲಹೆಗಾರ ಎಂ. ಗೋವಿಂದರಾವ್ ತಿಳಿಸಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಫೆ.3ರಿಂದ 5ರ ವರೆಗೂ ಹಣಕಾಸು ನೀತಿ ಸಮಿತಿ ಸಭೆಯು ನಡೆಯಲಿದೆ.
ಪ್ರಸಕ್ತ ರೆಪೊ ದರವು ಶೇ. 4ರಷ್ಟಿದೆ. ಈ ಬಗ್ಗೆ ಮಾತನಾಡಿರುವ ಆರ್ಥಿಕ ತಜ್ಞೆ ಅಧಿತಿ ನಾಯರ್, 'ಈಗಿರುವ ರೆಪೊ ದರವು ಮುಂದುವರೆಯಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆರ್ಥಿಕ ಚೇತರಿಕೆಯ ಬಗ್ಗೆ ಸ್ಪಷ್ಟತೆ ದೊರೆತ ನಂತರ ರೆಪೊ ದರದ ಬಗೆಗಿನ ನಿಲುವನ್ನು ಬದಲಾಯಿಸಬಹುದು' ಎಂದು ಹೇಳಿದ್ದಾರೆ.