ಮುಂಬೈ: 2024–25ನೇ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು, ಶೇ 4.5ರಷ್ಟು ಇರಲಿದೆ ಎಂದು ಹಣಕಾಸು ನೀತಿ ಸಮಿತಿ ಅಂದಾಜಿಸಿದೆ.
ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂಬ ಭಾರತೀಯ ಹವಾಮಾನ ಇಲಾಖೆಯು ಹೇಳಿದೆ. ಆದರೆ, ಆಹಾರ ಪದಾರ್ಥಗಳ ಬೆಲೆಯು ಅನಿಶ್ಚಿತತೆಯಿಂದ ಕೂಡಿದ್ದು, ಇದರ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದೆ.
‘ಚಿಲ್ಲರೆ ಹಣದುಬ್ಬರ ಕುರಿತ ಅಪಾಯಗಳು ಕೂಡ ಸಮತೋಲಿತವಾಗಿವೆ’ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆಹಾರ ಪದಾರ್ಥಗಳ ಬೆಲೆ ಏರಿಕೆ ನಡುವೆಯೂ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಹಣದುಬ್ಬರವು ಇಳಿಕೆಯಾಗಿದೆ. ಬೇಳೆಕಾಳು ಮತ್ತು ತರಕಾರಿಗಳ ಹಣದುಬ್ಬರವು ಎರಡಂಕಿ ದಾಟಿದೆ.
ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯ ಸೂಚಕವಾದ ಮೂಲ ಹಣದುಬ್ಬರ (ಕೋರ್ ಹಣದುಬ್ಬರ) 2023ರ ಜೂನ್ನಿಂದ ಮಂದಗತಿಯಲ್ಲಿದೆ. ಇದು ಆಹಾರ ಮತ್ತು ಇಂಧನ ಕ್ಷೇತ್ರವನ್ನು ಒಳಗೊಂಡಿಲ್ಲ. ಸೇವಾ ಹಣದುಬ್ಬರವು ಇಳಿಕೆಯಾಗಿದ್ದರೆ, ಸರಕುಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ.
‘ಈ ಬಾರಿಯ ಬೇಸಿಗೆಯಲ್ಲಿ ತಾಪಮಾನ ಹೆಚ್ಚಿದೆ. ಮತ್ತೊಂದೆಡೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಿದೆ. ಇದು ತರಕಾರಿಗಳು ಮತ್ತು ಹಣ್ಣುಗಳ ದರ ಏರಿಕೆಗೆ ಕಾರಣವಾಗಲಿದೆ’ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿಯೂ ಆಹಾರ ಪದಾರ್ಥಗಳ ಬೆಲೆಯು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಕೈಗಾರಿಕೆಯಲ್ಲಿ ಬಳಸುವ ಲೋಹಗಳ ಬೆಲೆಯು ಎರಡಂಕಿ ದಾಟಿದೆ. ಇದರಿಂದ ಕಾರ್ಖಾನೆಗಳ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
‘ಸರ್ಕಾರವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಸಂಗ್ರಹಣೆ ಮಾಡಿದೆ. ಗೋಧಿ ಮತ್ತು ಅಕ್ಕಿಯ ಕಾಪು ದಾಸ್ತಾನು ಹೆಚ್ಚಿದೆ. ಇದರಿಂದ ಆಹಾರದ ಹಣದುಬ್ಬರ ಇಳಿಕೆಯಾಗಬಹುದು. ಆದರೆ, ಜಾಗತಿಕ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲದ ಬೆಲೆಯು ಅನಿಶ್ಚಿತತೆಯಿಂದ ಕೂಡಿದೆ’ ಎಂದು ಹೇಳಿದ್ದಾರೆ.