ನವದೆಹಲಿ/ಮುಂಬೈ: ಷೇರುಪೇಟೆಯ ಶುಕ್ರವಾರದ ವಹಿವಾಟಿನಲ್ಲಿ ನಕಾರಾತ್ಮಕ ವಹಿವಾಟು ನಡೆದಿದ್ದರಿಂದ ಹೂಡಿಕೆದಾರರ ಸಂಪತ್ತು ₹ 1.67 ಲಕ್ಷ ಕೋಟಿಗಳಷ್ಟು ಕರಗಿತು.
ದಿನದ ವಹಿವಾಟಿನಲ್ಲಿ ಷೇರುಪೇಟೆಯ ಬಂಡವಾಳ ಮೌಲ್ಯ ₹ 141 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ವಾಹನ ಮತ್ತು ಲೋಹ ವಲಯಗಳ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ) 425 ಅಂಶ ಕುಸಿತ ಕಂಡು, 36,546 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 126 ಅಂಶ ಇಳಿಕೆಯಾಗಿ 10,943 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ದಿನದ ವಹಿವಾಟಿನಲ್ಲಿ ಟಾಟಾ ಮೋಟರ್ಸ್ ಅತಿ ಹೆಚ್ಚಿನ ನಷ್ಟ ಕಂಡಿತು. ಮೂರನೇ ತ್ರೈಮಾಸಿಕದಲ್ಲಿ ₹ 26,960 ಕೋಟಿಗಳಷ್ಟು ನಷ್ಟ ಕಂಡಿದೆ. ಇದರಿಂದಷೇರು ಬೆಲೆ ಶೇ 17.93ರಷ್ಟು ಇಳಿಕೆ ಕಂಡಿತು.
ವಲಯವಾರು ಕುಸಿತ: ಎಫ್ಎಂಸಿಜಿ, ಬ್ಯಾಂಕಿಂಗ್ ಮತ್ತು ಔಷಧ ವಲಯದ ಷೇರುಗಳ ಬೆಲೆಯೂ ಇಳಿಕೆ ಕಂಡವು.
‘ಜಾಗತಿಕ ವಿದ್ಯಮಾನ ಮತ್ತು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಸಿಲುಕಿ ವಹಿವಾಟು ಇಳಿಕೆ ಕಂಡಿದೆ.
‘ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಇಳಿಕೆ ಮಾಡಿದೆ. ಇದರ ಜತೆಗೆ ಮಧ್ಯಂತರ ಬಜೆಟ್ ಕೂಡ ಷೇರುಪೇಟೆಗೆ ಬೆಂಬಲ ನೀಡಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.