ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

sorry ಸಾನಿಯಾ ನಾವು ಮನುಷ್ಯರಲ್ಲ!

Last Updated 31 ಜುಲೈ 2018, 13:15 IST
ಅಕ್ಷರ ಗಾತ್ರ

ಮಾತೆತ್ತಿದರೆ ನಾವು ಇದು ಮಹಾತ್ಮರ ನಾಡು ಎನ್ನುತ್ತೇವೆ. ಇಡೀ ವಿಶ್ವಕ್ಕೆ ಮಾನವೀಯತೆಯ ಪಾಠ ಮಾಡಿದ ದೇಶ ನಮ್ಮದು ಎಂದು ಬೀಗುತ್ತೇವೆ. ಮಹಾತ್ಮ ಗಾಂಧಿ ಹುಟ್ಟಿದ, ಸಂತ ಕಬೀರರ ನಾಡು ಇದು ಎಂದು ಕೊಂಡಾಡುತ್ತೇವೆ. ಮಾತನಾಡಲು ನಿಂತರೆ ಮಾನವೀಯತೆಯನ್ನು ಗುತ್ತಿಗೆ ಪಡೆದವರಂತೆ ಶಬ್ದಗಳನ್ನು ಉದುರಿಸುತ್ತೇವೆ. ನಿಜಕ್ಕೂ ನಮ್ಮ ನಾಡು ಹಾಗೆ ಇದೆಯೇ?

ಸಾರಿ ಸಾನಿಯ. ನಮ್ಮನ್ನು ಕ್ಷಮಿಸಿಬಿಡು. ನಾವು ಮನುಷ್ಯರಲ್ಲ. ಹಾಗಂತ ಕರೆದುಕೊಳ್ಳಲು ನಮಗೆ ಯಾವುದೇ ಹಕ್ಕು ಇಲ್ಲ. ನಮ್ಮ ಹೃದಯದಲ್ಲಿ ಮನುಷ್ಯತ್ವದ ಅಲೆ ಹಬ್ಬುವುದು ನಿಂತು ಬಹಳ ದಿನಗಳೇ ಕಳೆದಿವೆ. ಅಲ್ಲಿ ಈಗ ದ್ವೇಷದ ಕಣಗಳು ಉತ್ಪತ್ತಿಯಾಗುತ್ತವೆ. ಬೆಂಕಿ ಉಂಡೆಗಳು ಸಿಡಿಯುತ್ತವೆ. ನಮ್ಮ ಕೈಗಳು ಕಣ್ಣೀರು ಒರೆಸುವುದನ್ನು ನಿಲ್ಲಿಸಿವೆ. ಅವುಗಳಿಗೆ ಈಗ ರಕ್ತಸಿಕ್ತ ಚಾಕುವನ್ನು ಒರೆಸುವುದು ರೂಢಿಯಾಗಿದೆ.

ಸಾನಿಯಾ ಈಗ 9ನೇ ತರಗತಿ ಓದುವ ಬಾಲೆ. ಹೈದರಾಬಾದಿನವಳು. 2007ರ ಅ. 25ರಂದುನಡೆದ ಬಾಂಬ್ ಸ್ಫೋಟದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡಾಕೆ. ಬೀದಿಬದಿಯಲ್ಲಿ ಬಿದ್ದಿದ್ದ ಆ ಮಗುವನ್ನು ಪಾಪಾಲಾಲ್ ರವಿಕಾಂತ್ ಎಂಬ ವ್ಯಕ್ತಿ ತನ್ನ ಮನೆಗೆ ಕರೆತಂದು ಸಾಕಿಕೊಂಡಿದ್ದರು.

ಅನಾಥ ಮಗುವನ್ನು ಸಂತೈಸದ ಹಿಂದೂ ಮತ್ತು ಮುಸ್ಲಿಂ ಜನಾಂಗದವರು ಆಗಲೇ ಪಾಪಾಲಾಲ್ ರವಿಕಾಂತ್‌ಗೆ ಬೆದರಿಕೆ ಹಾಕಿದ್ದರು. ಮುಸ್ಲಿಂ ಬಾಲಕಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ಎರಡೂ ಧರ್ಮದವರ ವಿರೋಧ ಇತ್ತು. ಆದರೆ ಇದಕ್ಕೆಲ್ಲಾ ರವಿಕಾಂತ್ ತಲೆ ಕೆಡಿಸಿಕೊಂಡಿರಲಿಲ್ಲ. ಸಾನಿಯಾ ಬಂದ ನಂತರ ರವಿಕಾಂತ್ ಬಾಳಿನಲ್ಲಿ ಬೆಳಕು ಮೂಡಿತ್ತು.

ಸಾನಿಯಾ ಬರುವವರೆಗೆ ರವಿಕಾಂತ್‌ಗೆ ಮಕ್ಕಳು ಇರಲಿಲ್ಲ. ಆಕೆ ಮನೆಗೆ ಬಂದ ನಂತರ ಅವರ ಪತ್ನಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಳು. ತನಗೆ ನಾಲ್ಕು ಮಕ್ಕಳು ಎಂದು ಆಕೆಯನ್ನೂ ಅವರು ಮಗಳಂತೆಯೇ ಸಾಕಿದ್ದರು. ಸಾನಿಯಾಗೆ ‘ಅಂಜಲಿ’ ಎಂಬ ಹೆಸರು ಇಟ್ಟಿದ್ದರು.

ಸಾನಿಯಾ ಮನೆಗೆ ಬಂದು 11 ವರ್ಷ ಕಳೆದರೂ ಜನಾಂಗದ ವಿರೋಧವೇನೂ ಕಡಿಮೆಯಾಗಿರಲಿಲ್ಲ. ಆಕೆ ಶಾಲೆಗೆ ಹೋಗುವಾಗ ಕೆಲವರು ಹೀಯಾಳಿಸುತ್ತಿದ್ದರು, ಚುಡಾಯಿಸುತ್ತಿದ್ದರು, ಹಿಂಸೆ ನೀಡುತ್ತಿದ್ದರು.
ಆದರೂ ರವಿಕಾಂತ್ ಬೆದರಿರಲಿಲ್ಲ. ಸಾನಿಯಾಗೆ ರಕ್ಷಣೆ ಕೊಡುತ್ತಿದ್ದರು.

ಇತ್ತೀಚೆಗೆ ಒಂದು ಗುಂಪಿನ ಹಿಂಸೆ ಮಿತಿ ಮೀರಿತ್ತು. ಯಾವುದೇ ಕಾರಣಕ್ಕೂ ಸಾನಿಯಾ ಮನೆಯಲ್ಲಿ ಇರಬಾರದು ಎಂದು ಒತ್ತಡ ತರುತ್ತಲೇ ಇದ್ದರು. ‘ಹಿಂದೂ ಒಬ್ಬನ ಮನೆಯಲ್ಲಿ ಮುಸ್ಲಿಂ ಹುಡುಗಿ ಬೆಳೆಯುವುದು ಸರಿಯಲ್ಲ’ ಎಂದೇ ವಾದಿಸು
ತ್ತಿದ್ದರು. ಆದರೆ ಅದಕ್ಕೆಲ್ಲಾ ರವಿಕಾಂತ್ ಸೊಪ್ಪು ಹಾಕಿರಲಿಲ್ಲ.

ಜೂನ್ ಒಂದರಂದು ರವಿಕಾಂತ್ ಅವರ ಪತ್ನಿ ಮತ್ತು ಮಕ್ಕಳು ನೀರು ತರಲು ಹೋಗಿದ್ದರು. ಆಗ ಒಂದು ಗುಂಪು ರವಿಕಾಂತ್ ಮನೆಗೆ ನುಗ್ಗಿ ಅವರನ್ನು ಚೂರಿಯಿಂದ 16 ಬಾರಿ ಇರಿಯಿತು. ರವಿಕಾಂತ್ ರಕ್ತದ ಮಡುವಿನಲ್ಲಿ ಬಿದ್ದರು. ಅವರು ಸತ್ತು ಹೋದರು ಎಂದು ವಿಜಯೋತ್ಸವ ಆಚರಿಸಿ ಗುಂಪು ಹೊರಕ್ಕೆ ಹೋಯಿತು.

ಪತ್ನಿ ಮತ್ತು ಮಕ್ಕಳು ಬಂದು ನೋಡಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ರವಿಕಾಂತ್ ಸಾಯಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದರು. ಇಬ್ಬರನ್ನು ಬಂಧಿಸಿದ್ದಾರೆ.

ಆಸ್ಪತ್ರೆಯಲ್ಲಿ ಇರುವ ತಂದೆಯ ಶುಶ್ರೂಷೆ ಮಾಡುತ್ತಿರುವ ಸಾನಿಯಾ, ‘ನನ್ನ ತಂದೆಯನ್ನು ಕೊಲ್ಲಲು ಯತ್ನಿಸಿದವರು ಇದೇ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ನನ್ನನ್ನು ಸಾಕಿದ ತಪ್ಪಿಗೆ ಅಪ್ಪ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ನಾನು ಮುಂದೆ ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುತ್ತೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ. ನನ್ನ ತಂದೆಯನ್ನು ರಕ್ಷಿಸುತ್ತೇನೆ. ಯಾಕೆಂದರೆ ನನ್ನ ತಂದೆ ಯಾವಾಗಲೂ ನನ್ನ ರಕ್ಷಣೆ ಮಾಡುತ್ತಿದ್ದರು’ ಎಂದು ಹೇಳುತ್ತಾಳೆ.

ಇದು ಮಹಾತ್ಮರ ನಾಡಿನಲ್ಲಿ ನಡೆಯುವ ಘಟನೆಯೇ? ಅಪ್ಪ ಅಮ್ಮನನ್ನು ಕಳೆದುಕೊಂಡು ಬೀದಿಯಲ್ಲಿ ಬಿದ್ದ ಬಾಲಕಿಯೊಬ್ಬಳಿಗೆ ಬದುಕು ಕಟ್ಟಿಕೊಟ್ಟ ವ್ಯಕ್ತಿಗೆ ಕೊಡುವ ಬಹುಮಾನ ಇದೇಯೇನು? ಮಾನವೀಯತೆ ಎನ್ನುವುದು ಎಲ್ಲ ಧರ್ಮಗಳ ಎಲ್ಲೆಯನ್ನು ಮೀರಬೇಕಲ್ಲವೇ? ನಮ್ಮ ಎಲ್ಲ ಸಂತರು ಹೇಳಿದ್ದು ಇದನ್ನೇ ಅಲ್ಲವೇ?

ರಸ್ತೆಯಲ್ಲಿ ಅನಾಥಳಾಗಿ ಅಳುತ್ತಾ ನಿಂತ ಬಾಲಕಿಗಾಗಿ ನಮ್ಮ ಹೃದಯ ಮಿಡಿಯುವುದಿಲ್ಲ. ಕಣ್ಣುಗಳು ನೀರು ಹರಿಸುವುದಿಲ್ಲ. ಆದರೆ ಆಕೆಯನ್ನು ಹಿಂದೂ ಒಬ್ಬ ತನ್ನ ಮನೆಯಲ್ಲಿ ಇಟ್ಟುಕೊಂಡ ಎಂಬ ಕಾರಣಕ್ಕೆ ನಮ್ಮ ಹೃದಯಲ್ಲಿ ಸಿಟ್ಟಿನ ಅಲೆಗಳು ಏಳುತ್ತವೆ. ದ್ವೇಷ ಹೊಂಚು ಹಾಕುತ್ತದೆ. ‘ಧರ್ಮವನ್ನು ರಕ್ಷಿಸುವುದಕ್ಕಾಗಿ ಇನ್ನೊಬ್ಬನನ್ನು ಕೊಲ್ಲು’ ಎಂದು ಮನಸ್ಸು ಸೂಚಿಸುತ್ತದೆ. ಇಂತಹ ಮನೋಭಾವ ಬರಲು ಕಾರಣವಾದ ಅಂಶವಾದರೂ ಯಾವುದು?

ಇಂತಹದೇ ಇನ್ನೊಂದು ಘಟನೆ ಲಖನೌದಲ್ಲಿ ನಡೆದಿದೆ. ಮೊಹಮ್ಮದ್ ಅನಾದ್ ಸಿದ್ದಿಕಿ ಮತ್ತು ತನ್ವಿ ಸೇಥ್ ಎಂಬುವವರು ಮದುವೆಯಾಗಿ 12 ವರ್ಷ ಆಗಿದೆ. ಅವರ ಸಂಸಾರದಲ್ಲಿ ‘ನೀನು ಹಿಂದೂ ನಾನು ಮುಸ್ಲಿಂ’ ಎಂಬ ಭಾವನೆ ಇಲ್ಲ. ಒಲವೆ ನಮ್ಮ ಬದುಕು ಎಂದು ಅವರು ಬಾಳುತ್ತಿದ್ದಾರೆ.

ಜೂನ್ 18ರಂದು ಈ ದಂಪತಿ ಪಾಸ್‌ಪೋರ್ಟ್ ಕಚೇರಿಗೆ ಹೋಗಿದ್ದರು. ಅಲ್ಲಿನ ಅಧಿಕಾರಿ ತನ್ವಿಸೇಥ್ ಗೆ ‘ನೀನು ನಿನ್ನ ಸರ್ ನೇಮ್ ಬದಲಾಯಿಸಿಕೊಳ್ಳಬೇಕು. ಭಾರತದಲ್ಲಿ ಮದುವೆಯಾದ ಎಲ್ಲ ಹೆಣ್ಣು ಮಕ್ಕಳೂ ಸರ್ ನೇಮ್ ಬದಲಾಯಿಸಿಕೊಳ್ಳುತ್ತಾರೆ. ನೀನು ಯಾಕೆ ಬದಲಾಯಿಸಿಕೊಂಡಿಲ್ಲ. ನಿನ್ನ ಹೆಸರು ಬದಲಾಯಿಸಿಕೊಂಡು ಬಂದ ನಂತರ ಪಾಸ್‌ಪೋರ್ಟ್ ನೀಡುತ್ತೇನೆ’ ಎನ್ನುತ್ತಾನೆ.

ಅದೇ ರೀತಿ ಮೊಹಮ್ಮದ್ ಅನಾಸ್ ಸಿದ್ದಿಕಿ ಅವರಿಗೆ, ‘ನೀನು ಹಿಂದೂ ಆಗಿ ಬದಲಾಗು’ ಎನ್ನುತ್ತಾನೆ. ಈ ದಂಪತಿಗೆ ಬೆಂಬಲ ನೀಡಿದ್ದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ನಮ್ಮ ಜನ ಟೀಕೆ ಮಾಡುತ್ತಾರೆ. ಮಾನಹಾನಿಕರ ಟ್ವೀಟ್ ಮಾಡುತ್ತಾರೆ. ಪಾಸ್‌ಪೋರ್ಟ್ ಕಚೇರಿಯಲ್ಲಿ ಉದ್ಧಟತನದ ಮಾತು ಆಡಿದ ಅಧಿಕಾರಿಯನ್ನು ಬೆಂಬಲಿಸುತ್ತಾರೆ.

ಅಧಿಕಾರಿಯೊಬ್ಬ ಹೀಗೆ ಧರ್ಮದ ಹೆಸರಿನಲ್ಲಿ ಟೀಕೆ ಮಾಡುವಂತಹ ಧೈರ್ಯವನ್ನು ತಂದುಕೊಟ್ಟಿದ್ದು ಯಾವುದು? ‘ನೀನು ಹಿಂದೂ ಧರ್ಮಕ್ಕೆ ಮತಾಂತರ ಆಗಿಬಿಡು ಅಥವಾ ನೀನು ಮುಸ್ಲಿಂ ಧರ್ಮಕ್ಕೆ ಸೇರಿಕೊಂಡು ಬಿಡು’ ಎಂದು ಸಲಹೆ ನೀಡುವ ಮಟ್ಟಕ್ಕೆ ಯಾರಾದರೂ ಮುಂದಾದರೆ ಅದಕ್ಕೆ ಉತ್ತೇಜನ ಕೊಟ್ಟಿದ್ದು ಯಾರು?

ಮೂಲವನ್ನು ಶೋಧಿಸದೆ ನಮಗೆ ಉತ್ತರ ಸಿಗಲ್ಲ. ಇದಕ್ಕೆ ಉತ್ತರ ಸಿಗದೆ ನಮ್ಮ ದೇಶ ಮಹಾತ್ಮರ ನಾಡು ಆಗಲ್ಲ. ಮನುಷ್ಯನಿಗೆ ಮನುಷ್ಯತ್ವ ಇದೆ ಎನ್ನುವುದು ಖಾತ್ರಿಯಾಗುವುದಿಲ್ಲ. ಹುಲಿ, ಸಿಂಹ, ಚಿರತೆ, ಕಾಳಿಂಗ ಸರ್ಪ ಮುಂತಾದವುಗಳೂ ಕೂಡ ತಮ್ಮದೇ ಜಾತಿಯ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದಿಲ್ಲ. ಪ್ರಾಣಿಗಳಿಂದಾದರೂ ನಾವು ಒಂದಿಷ್ಟು ಮನುಷ್ಯತ್ವವನ್ನು ಕಡ ಪಡೆಯಬಾರದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT