ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನುಭವಗಳ ತೆರೆಸಾಲು

Last Updated 13 ಡಿಸೆಂಬರ್ 2021, 2:39 IST
ಅಕ್ಷರ ಗಾತ್ರ

ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ ? |
ದಿನದಿನವು ಕಡಲಲೆಗಳಂತೆ ಪರಿವುದದು ||
ಅನುಮಿತಿಯ ನಿರ್ಧಾರರವದರಿಂ ನಿರಾಧಾರ |
ದನಿ ನೂರು ನರನೆದೆಗೆ – ಮಂಕುತಿಮ್ಮ || 517 ||

ಪದ-ಅರ್ಥ: ಮನುಸಾಕಲ್ಯದನುಭವಕೆ=ಮನುಜ=ಸಾಕಲ್ಯದ(ಸಮಗ್ರತೆಯ)+ಅನುಭವಕೆ, ಪರಿವುದದು=ಪರಿವುದು(ಹರಿವುದು)+ಅದು, ಅನುಮಿತಿ=ಊಹೆ, ಅನುಮಾನ, ನಿರ್ಧಾರವದರಿಂ=ನಿರ್ಧಾರವು+ಅದರಿಂ(ಅದರಿಂದ), ನರನೆದೆಗೆ=ನರನ+ಎದೆಗೆ.

ವಾಚ್ಯಾರ್ಥ: ಮನುಷ್ಯನ ಸಮಗ್ರದ ಅನುಭವಕ್ಕೆ ಮಿತಿ ಏನಾದರೂ ಇದೆಯೆ? ನಿತ್ಯವೂ ಅದು ಸಮುದ್ರದ ಅಲೆಗಳಂತೆ ಹರಿಯುತ್ತದೆ. ಹೀಗೆ ಚಂಚಲವಾದ, ಮಿತಿಯಿಲ್ಲದ ಊಹೆಗಳಿಂದ ಯಥಾರ್ಥವನ್ನು ತೀರ್ಮಾನಿಸುವುದು ನಿರಾಧಾರ. ಮನುಷ್ಯನ ಹೃದಯಕ್ಕೆ ನೂರಾರು ಭಾವನೆಯ ಧ್ವನಿಗಳು.

ವಿವರಣೆ: ಲೋಕದಲ್ಲಿ ಎಷ್ಟು ಜನರಿದ್ದಾರೋ, ಅಷ್ಟು ವಿಭಿನ್ನ ಅನುಭವಗಳು. ದೃಷ್ಟಿಕೋನ ಬದಲಾದಂತೆ ಅನುಭವವೂ ಬದಲು. ಒಬ್ಬ ಮನುಷ್ಯ ಮತ್ತೊಬ್ಬನಿಗೆ ತುಂಬ ಒಳ್ಳೆಯವನಾಗಿ ಕಾಣುತ್ತಾನೆ. ಅವನ ಬಗ್ಗೆ ತುಂಬ ಅಭಿಮಾನ. ಮುಂದೊಂದು ದಿನ ತನ್ನ ಹಿಂದಿನ ತೊಂದರೆಗೆ ಅವನೇ ಕಾರಣವೆಂದು ತಿಳಿದಾಗ, ಆತ ಮಾಡಿದ್ದು, ಹೇಳಿದ್ದು ಎಲ್ಲ ಅಪಥ್ಯ. ಹಿಂದಿನ ಅನುಭವ ಕರಗಿ ಹೋಯಿತು. ಬೆಟ್ಟದ ತುದಿಯ ಮೇಲೆ ನಿಂತಿದ್ದವನಿಗೆ, ಕೆಳಗೆ ಅಡ್ಡಾಡುವ ಮನುಷ್ಯ ಪುಟ್ಟಗೊಂಬೆಯಂತೆ ಕಾಣುತ್ತಾನೆ. ಅವನನ್ನು ನೋಡಿ ನಗುತ್ತಾನೆ. ಕೆಳಗೆ ಇದ್ದವನಿಗೂ ಮೇಲೆ ಇದ್ದವನು ಗುಬ್ಬಚ್ಚಿಯಂತೆ ತೋರುತ್ತಾನೆ. ಇಬ್ಬರೂ ಸಮಾನಗಾತ್ರರೇ. ಒಬ್ಬರ ದೃಷ್ಟಿಯಲ್ಲಿ ಮತ್ತೊಬ್ಬ ಸಣ್ಣವ. ಇದು ಗಾತ್ರದಲ್ಲಿ ಮಾತ್ರ ಕಂಡ ವ್ಯತ್ಯಾಸವಲ್ಲ. ಅಹಂಕಾರದಲ್ಲಿ, ತಿಳಿವಳಿಕೆಯಲ್ಲಿಯೂ ಈ ಅನುಭವದ ವ್ಯತ್ಯಾಸ ಇದೆ.

ಉರಿಲಿಂಗಪೆದ್ದಿ, ಉರಿಲಿಂಗದೇವರ ಶಿಷ್ಯನಾಗಿದ್ದವನು. ಮೊದಲು ಅವನೊಬ್ಬ ಕಳ್ಳ. ಆಗ ಅವನ ಪ್ರಪಂಚದ ಅನುಭವವೇ ಬೇರೆ. ಹಣ, ವಸ್ತು ಕಂಡರೆ ಕದಿಯಬೇಕೆಂಬ ಭಾವ. ಧರ್ಮ, ಸಂಸ್ಕೃತಿಯ ಮಾತು ಅವನಿಗೆ ಅಪಥ್ಯ. ಒಂದು ರಾತ್ರಿ ಕಳ್ಳತನಕ್ಕೆ ಮನೆಯೊಂದನ್ನು ಸೇರಿದ. ಅಲ್ಲಿ ಮಹಾನ್ ಶರಣರೊಬ್ಬರು ಶಿವಯೋಗ ಸಾಧನೆ ಮಾಡುತ್ತಿದ್ದಾರೆ. ಮರೆನಿಂತು ಎವೆಯಿಕ್ಕದೆ ಅದನ್ನೇ ನೋಡಿದ ಕಳ್ಳ. ಅವರು ಏಕಾಗ್ರತೆಯಿಂದ ನೋಡುತ್ತಿದ್ದ ಲಿಂಗವನ್ನು, ಅವರ ಕಣ್ಣಿನ ಕಾಂತಿಯನ್ನು, ಸಾಧಕರ ಮುಖದ ಮೇಲೆ ಹೊಳೆಯುತ್ತಿದ್ದ ತೇಜಸ್ಸನ್ನು ಕಂಡ. ತನಗೂ ಅದನ್ನು ಪಡೆಯಬೇಕೆನ್ನಿಸಿತು. ಕೆಳಗಿಳಿದು ಬಂದು ಅವರ ಮುಂದೆ ಕುಳಿತ. ಗುರು ಇಷ್ಟಲಿಂಗವನ್ನು ಕೊಟ್ಟರು. ಕಳ್ಳ ಉರಿಲಿಂಗ ಪೆದ್ದಿ ಶರಣ ಉರಿಲಿಂಗ ಪೆದ್ದಿಯಾದ. ಅರ್ಚಿಸಿ ಅಂಗ-ಲಿಂಗ ಸಾಮರಸ್ಯ ಸಾಧಿಸಿ ಬಯಲಾದ. ಅವನ ಅನುಭವವೇ ಬೇರೆಯಾಯಿತು. ಮೊದಲು ಆಕರ್ಷಣೆಯಾಗಿದ್ದ ಧನಕನಕಗಳು ಈಗ ತ್ಯಾಜ್ಯವಸ್ತುಗಳು. ಶರಣ ಪೆದ್ದಿಗೆ ಎಲ್ಲರೂ ಸಜ್ಜನರು. ಒಂದು ಗಳಿಗೆಯಲ್ಲಾದ ಬದಲಾವಣೆ ಅವನ ಅನುಭವಗಳನ್ನೇ ಪರಿವರ್ತಿಸಿತು.

ಈ ಮಾತನ್ನು ಕಗ್ಗ ತಿಳಿಸುತ್ತದೆ. ಸಮುದ್ರದ ಅಲೆಗಳಂತೆ ಮನುಷ್ಯನ ಬದುಕಿನಲ್ಲಿ ಅನುಭವಗಳು ಬರುತ್ತವೆ. ಒಂದು ಮತ್ತೊಂದನ್ನು ಅಳಿಸಿ ಬಿಡುತ್ತದೆ. ಈ ಅನುಭವಗಳ ಸಮಗ್ರತೆಗೆ ಏನಾದರೂ ಮಿತಿ ಇದೆಯೆ? ಬದುಕು ಪ್ರತಿಕ್ಷಣ ಬದಲಾಗುವ ಮೂಸೆಯಲ್ಲಿಯ ವಸ್ತು. ಹೀಗೆ ಸದಾ ಪರಿವರ್ತಿತವಾಗುವ, ಚಂಚಲವಾಗಿರುವ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಇದೇ ಪರಮಸತ್ಯ ಎಂದು ತೀರ್ಮಾನ ಮಾಡುವುದು ಸಾಧ್ಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT