ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪರಮಶಾಂತಿಯ ನೆಲೆ

Published 18 ಮೇ 2023, 18:35 IST
Last Updated 18 ಮೇ 2023, 18:35 IST
ಅಕ್ಷರ ಗಾತ್ರ

ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ|
ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ||
ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ|
ಪರಸತ್ತ್ವ ಶಾಂತಿಯಲಿ - ಮಂಕುತಿಮ್ಮ||887||

ಪದ-ಅರ್ಥ: ಪರಿಪೂರ್ಣಸುಖವನೆಳಸುವನು= ಪರಿಪೂರ್ಣ+ ಸುಖವನು+ ಎಳಸುವನು (ಅಪೇಕ್ಷಿಸುವವನು), ತನ್ನೊಳಗಡೆಗೆ= ತನ್ನ+ ಒಳಗಡೆಗೆ, ನಿರ್ಮಲದಿಂ= ನಿರ್ಮಲವಾಗಿ, ನಿರತಿಶಯ= ಅಲೌಕಿಕ, ವಿಶ್ವಾತ್ಮವೀಕ್ಷೆಯಲಿ= ವಿಶ್ವಾತ್ಮ+ ವೀಕ್ಷೆಯಲಿ (ನೋಡುವಿಕೆಯಲ್ಲಿ).

ವಾಚ್ಯಾರ್ಥ: ಪರಿಪೂರ್ಣ ಸುಖವನ್ನು ಬಯಸುವವನು ತನ್ನ ನಿರ್ಮಲವಾದ ದೃಷ್ಟಿಯನ್ನು ಒಳಗಡೆಗೆ ತಿರುಗಿಸಬೇಕು. ಅಲ್ಲಿ ವಿಶ್ವಾತ್ಮದ ನೋಡುವಿಕೆಯಲ್ಲಿ, ಪರಸತ್ವದ ಶಾಂತಿಯಲ್ಲಿ ಅಲೌಕಿಕವಾದ ಸುಖವಿದೆ.

ವಿವರಣೆ: ಒಬ್ಬ ಮನುಷ್ಯ ರಾತ್ರಿಯಿಡೀ ಪ್ರಾರ್ಥಿಸುತ್ತಿದ್ದ. ಬೆಳಕು ತನ್ನ ಕೋಣೆಯಲ್ಲಿ ಬರಲಿ ಎಂಬುದು ಪ್ರಾರ್ಥನೆ. ಆಗ ಗುರು ಹೇಳುತ್ತಾನೆ, ‘ಯಾಕೆ ರಾತ್ರಿಯಲ್ಲಿ ಬೆಳಕಿಗೆ ಪ್ರಾರ್ಥಿಸುತ್ತೀ? ಪ್ರಾರ್ಥನೆ ನಿಲ್ಲಿಸು. ಕಿಟಕಿಯ ಪರದೆಗಳನ್ನು ಸರಿಸು, ಕಿಟಕಿಯ ಬಾಗಿಲುಗಳನ್ನು ತೆರೆ. ಸುಮ್ಮನೆ ಕುಳಿತುಕೋ. ಸೂರ್ಯ ತಾನೇ ತಾನಾಗಿ ಬಂದು ಕೋಣೆಯಲ್ಲಿ ಬೆಳಕು ಚೆಲ್ಲುತ್ತಾನೆ’. ಹಾಗೆಯೇ ಆಯಿತು. ಅಂತೆಯೇ ಭಗವಂತನ ಕೃಪೆ ದೊರಕಲಿ ಎಂಬ ಪ್ರಾರ್ಥನೆ ಬೇಕಿಲ್ಲ. ಮನಸ್ಸನ್ನು ಸ್ವಚ್ಛಗೊಳಿಸಬೇಕು, ಹೃದಯದ ಬಾಗಿಲುಗಳನ್ನು ವಿಶಾಲವಾಗಿ ತೆರೆಯಬೇಕು. ಆಗ ಮನಸ್ಸಿನ ಮಧ್ಯದಲ್ಲಿ ಭಗವಂತನ ಅವತರಣವಾಗುತ್ತದೆ. ಇದೇ ಅನಿಕೇತನ ದೃಷ್ಟಿ.

ಗುಡಿ ಕಟ್ಟುತ್ತೇವೆ. ಅದರೊಳಗೆ ವಿಗ್ರಹವನ್ನು ಪ್ರತಿಷ್ಠಾಪಿಸುತ್ತೇವೆ. ಅಲ್ಲಿ ಭಗವಂತನಿದ್ದಾನೆಂದು ಭಾವಿಸುತ್ತೇವೆ. ಭಗವಂತನನ್ನು ಒಂದು ಕಲ್ಲಿನ ಕಟ್ಟಡದಲ್ಲಿ ಬಂಧಿಸುವುದು ಸಾಧ್ಯವೆ? ಬೊಗಸೆಯಲ್ಲಿ ಸಮುದ್ರ ಹಿಡಿಯುವದಾದೀತೇ? ವಿಗ್ರಹದಲ್ಲಿ ದೇವರನ್ನು ಕಾಣಬಹುದು. ಆದರೆ ಅಲ್ಲಿ ಮಾತ್ರ ಇದ್ದಾನೆಂಬುದು ಸಮಂಜಸವಲ್ಲ.

ಅದಕ್ಕೇ ಕಗ್ಗ ತಿಳಿ ಹೇಳುತ್ತದೆ, ಪರಿಪೂರ್ಣ ಆನಂದ ಬೇಕು ಎನ್ನುವವನು ಹೊರಪ್ರಪಂಚ ವೀಕ್ಷಣೆಯಿಂದ ಮನಸ್ಸನ್ನು ಒಳಗಡೆ ತಿರುಗಿಸಲಿ. ಯಾಕೆಂದರೆ, ಹೊರಗಿನ ಪ್ರಪಂಚದಲ್ಲಿ ಎಲ್ಲವೂ ಸೊರಗಿ, ಕರಗಿ ವ್ಯಯವಾಗಿ ಹೋಗುತ್ತವೆ. ದೇಹ, ಅಧಿಕಾರ, ಸಂಪತ್ತು, ಸಂಬಂಧಿಕರು, ಸ್ನೇಹಿತರು ಎಲ್ಲವೂ ಮೋಡದಂತೆ ಚದುರಿ ಹೋಗುತ್ತವೆ. ಆದರೆ ಎಂದಿಗೂ ಚದುರದ, ಕರಗದ ಅವ್ಯಯನಾದ ಆತ್ಮನಿದ್ದಾನೆ. ಅವನನ್ನು ಯಾವ ಹೆಸರಿನಿಂದಾದರೂ ಕರೆಯಬಹುದು – ದೇವರು, ಪರಮಾತ್ಮ, ಪರವಸ್ತು, ಬ್ರಹ್ಮ ಇತ್ಯಾದಿ. ಅದು ಇರುವುದು ಹೊರಗಲ್ಲ, ನನ್ನೊಳಗೆಯೇ ಅದು ಇದೆ. ವ್ಯಯವಾಗುವುದನ್ನು ನೋಡುತ್ತ ಅವ್ಯಯವನ್ನು ಧ್ಯಾನಿಸುವುದು ಯೋಗ. ಅದೇ ಜ್ಞಾನ ಮಾರ್ಗ.

ಆ ಅವ್ಯಯವನ್ನು ನಮ್ಮ ಹೃದಯದೊಳಗೇ ಧ್ಯಾನಿಸಲು ಮನಸ್ಸನ್ನು ಅಂತರ್ಮುಖಿಯನ್ನಾಗಿಸಬೇಕು. ಅದಕ್ಕೆ ಮನಸ್ಸು ನಿರ್ಮಲವಾಗಬೇಕು. ಆಗ ನಮಗೆ ದಕ್ಕುವುದು, ಆ ಪರವಸ್ತುವಿನ ನೋಟ. ಅದೊಂದು ಅಲೌಕಿಕವಾದ ಸುಖ. ಪ್ರಪಂಚದಲ್ಲಿ ದೊರಕುವ ಯಾವುದೇ ಸಂತೋಷಕ್ಕಿಂತ ಮಿಗಿಲಾದದ್ದು. ಆ ಪರಸತ್ವದ ಅನುಸಂಧಾನದಲ್ಲಿ ದೊರೆಯುವುದು ಪರಮಶಾಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT