ಶಿವರಾತ್ರಿ ಅಮಾವಾಸ್ಯೆ ಬಳಿಕ ಆಗಸದಲ್ಲಿ ಚಂದ್ರ ಗೋಚರಿಸಿದ ದಿನದಿಂದ, ವಿಜಯಪುರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದ ಎಲ್ಲೆಡೆ ಹಲಗೆ ನಿನಾದ ಮಾರ್ದನಿಸುತ್ತಿದೆ. ಹೋಳಿ ಹುಣ್ಣಿಮೆ ಸಮೀಪಿಸಿದಂತೆ ಯುವಕರು, ಚಿಣ್ಣರ ಕೈಯಲ್ಲಿ ಹಲಗೆಗಳು ರಾರಾಜಿಸುತ್ತಿವೆ. ಗಲ್ಲಿ ಗಲ್ಲಿಯಲ್ಲೂ ಹಲಗೆಯದ್ದೇ ಸದ್ದು...
ಹಲಗೆಯ ನಿನಾದ ಇದೀಗ ಉನ್ಮಾದ ಸ್ಥಿತಿ ತಲುಪಿದೆ. ಹುಣ್ಣಿಮೆ ಸಮೀಪಿಸಿದಂತೆ ಬಣ್ಣದೋಕುಳಿಯ ಸಂಭ್ರಮ ಎಲ್ಲರ ಮನದಲ್ಲೂ ಮೂಡಿದೆ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಕಾಮ ದಹನ, ಬಣ್ಣದೋಕುಳಿ, ರಂಗ ಪಂಚಮಿಯ ಬಣ್ಣದ ರಂಗಿನಾಟದ ಆಚರಣೆಗೆ ಕಾತರದಿಂದ ಕಾದಿದ್ದಾರೆ. ಬಜಾರ್ಗಳಲ್ಲಿ ಬಣ್ಣ ಖರೀದಿ ಇನ್ನಷ್ಟೇ ಬಿರುಸುಗೊಳ್ಳಲಿದೆ.
ಮಾರ್ಚ್ 20ರ ಬುಧವಾರ ಹೋಳಿ ಹುಣ್ಣಿಮೆ. ಹುಣ್ಣಿಮೆಯ ಐದು ದಿನ ಮುಂಚಿತವೇ ಕಾಮ ದಹನದ ಸ್ಥಳ ಆಯಾ ಓಣಿಗಳಲ್ಲಿ ನಿಗದಿಯಾಗಿದೆ. ಮನೆ ಮುಂದೆ, ಓಣಿಯ ಪ್ರಮುಖ ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಹುಣ್ಣಿಮೆಯ ಮುಸ್ಸಂಜೆ ಈ ಗುಂಡಿ ಸುತ್ತಲೂ ಸೆಗಣಿಯಿಂದ ಸಾರಿಸಿ, ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ, ಕಾಮನ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಧಾರ್ಮಿಕ ವಿಧಿ–ವಿಧಾನಗಳನ್ನು ಪೂರೈಸಿದ ಬಳಿಕ ಕಟ್ಟಿಗೆ, ಸೆಗಣಿಯ ಕುಳ್ಳಿನಿಂದ ಕಾಮ ದಹನ ನಡೆಯಲಿದೆ.
ಕಾಮ ದಹನದ ಮರು ದಿನವೇ ಬಣ್ಣದ ಸಂಭ್ರಮ. ಅಂದರೆ ಈ ಬಾರಿ ಬಣ್ಣದಾಟ ಗುರುವಾರ (ಮಾರ್ಚ್ 21) ರಂಗೇರಲಿದೆ. ಕೆಲವರು ಶುಕ್ರವಾರವೂ ಬಣ್ಣ ಎರಚುತ್ತಾರೆ. ರಂಗಪಂಚಮಿವರೆಗೂ ಬಣ್ಣದ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ಈ ಬಾರಿ ಇದು ತುಸು ಹೆಚ್ಚೇ ಇರಲಿದೆ. ಮಾರ್ಚ್ 25ರ ಸೋಮವಾರ ರಂಗ ಪಂಚಮಿ. ಈ ರಂಗ ಪಂಚಮಿಯ ರಂಗಿನಾಟದೊಂದಿಗೆ ಹೋಳಿ ಸಂಭ್ರಮಕ್ಕೆ ತೆರೆ ಬೀಳಲಿದೆ.
ವರ್ಷಕ್ಕೊಮ್ಮೆ ಬರುವ ಹೋಳಿ ಹುಣ್ಣಿಮೆಗಾಗಿ ಕಾತರದಿಂದ ಕಾಯುವ ಯುವ ಸಮೂಹ, ಚಿಣ್ಣರ ತಂಡ ಇದೀಗ ಹೋಳಿ ಆಚರಣೆಗಾಗಿ ಅಂತಿಮ ಸಿದ್ಧತೆ ನಡೆಸಿದೆ. ಕಾಮ ದಹನಕ್ಕೆ ಬೀದಿ ಬೀದಿ ಸುತ್ತಿ ಕಟ್ಟಿಗೆ, ಕುಳ್ಳು ಸಂಗ್ರಹಿಸಿದೆ. ಯುವಕರ ತಂಡ ಹಲಗೆ ಬಾರಿಸಿ ಮನೆ ಮನೆಗಳಿಂದ ಚಂದಾ ವಸೂಲಿ ಮಾಡುವ ಮೂಲಕ ಹೋಳಿಗೆ ಅದ್ಧೂರಿ ಮುನ್ನುಡಿ ಬರೆದಿದೆ.
ಬಜಾರ್ಗೆ ದಾಂಗುಡಿಯಿಟ್ಟು ಪಿಚಕಾರಿ, ಬಣ್ಣ ಖರೀದಿಸಿದೆ. ಮೂರು ದಿನ ಬಣ್ಣದೋಕುಳಿಯಲ್ಲಿ ಮಿಂದೇಳುವ ಸಂಭ್ರಮದ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ. ಬಣ್ಣದಾಟಕ್ಕಾಗಿಯೇ ನಗರದ ಕಿರಾಣ ಬಜಾರ್, ಎಲ್ಬಿಎಸ್ ಮಾರುಕಟ್ಟೆ, ಸರಾಫ್ ಬಜಾರ್ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವಹಿವಾಟು ಬಂದ್ ಆಗಲಿದೆ. ಬಣ್ಣದಾಟದ ಅಂಗವಾಗಿಯೇ ಗಲ್ಲಿಗಳಲ್ಲಿ ಮನರಂಜನೆ ಸ್ಪರ್ಧೆ ಆಯೋಜನೆಗೊಂಡಿರುವುದು ಈ ಬಾರಿಯ ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.