ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ, ಸಿನಿಮಾ, ಸುಭಾಷ್‌ ಬಾಬು

ಬಲಪಂಥೀಯರು ಕಟ್ಟಿಕೊಡುತ್ತಿರುವ ಚಿತ್ರಕ್ಕಿಂತ ಬೋಸ್ ಹೇಗೆ ಭಿನ್ನವಾಗಿದ್ದರು?
Last Updated 21 ಜನವರಿ 2019, 20:26 IST
ಅಕ್ಷರ ಗಾತ್ರ

ನಿರೀಕ್ಷೆಯಂತೆ ‘ಉರಿ– ದ ಸರ್ಜಿಕಲ್ ಸ್ಟ್ರೈಕ್’ ಚಲನಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಖುಷಿ ಪಡುವ ವಿಚಾರ. ಸೇನೆಯ ಸಾಹಸವನ್ನು ಸದಾ ನೆನಪಿನಲ್ಲಿಡಲು, ಹುತಾತ್ಮ ಸೈನಿಕರನ್ನು ಗೌರವದಿಂದ ನೆನೆಯಲು ಸಿನಿಮಾ ಕೂಡ ಒಂದು ಮಾಧ್ಯಮ ಎಂದು ಪರಿಗಣಿಸಿದರೆ, ನಿಜಕ್ಕೂ ಇದೊಂದು ಉತ್ತಮ ಪ್ರಯತ್ನ.

ಆದರೆ, ಈ ಪ್ರಯತ್ನದ ಉದ್ದೇಶವೇ ಬೇರೆಯಾಗಿರುವುದು ದುರಂತ. ಈವರೆಗೆ ಭಾರತೀಯ ಸೇನೆ ಮತ್ತು ಯುದ್ಧವನ್ನು ಆಧರಿಸಿ ಹತ್ತಾರು ಸಿನಿಮಾಗಳು ಬಂದಿವೆ. ಆದರೆ ಇತ್ತೀಚಿನ ‘ಪರಮಾಣು’ ಮತ್ತು ‘ಉರಿ– ದ ಸರ್ಜಿಕಲ್ ಸ್ಟ್ರೈಕ್’ ಸಿನಿಮಾಗಳಂತೆ ಯಾವುವೂ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ರಾಜಕಾರಣಿಯ ಪ್ರಚಾರ ಸರಕಿನಂತೆ ಬಳಕೆಯಾಗಿರಲಿಲ್ಲ.

ಅದರಲ್ಲೂ ‘ಉರಿ...’ ಸಿನಿಮಾದ ಮೂಲಕ, ಸೇನೆಗೆ ಸಿಗಬೇಕಿದ್ದ ಮೆಚ್ಚುಗೆಯನ್ನು ಮೋದಿ ಭಕ್ತರು ಸಂಪೂರ್ಣ ಹೈಜಾಕ್ ಮಾಡಿದ್ದಾರೆ. ‘ರಾಷ್ಟ್ರಾಭಿಮಾನ ಇರುವವರೆಲ್ಲರೂ ಈ ಸಿನಿಮಾ ನೋಡಿ, ಮೋದಿಯವರ ತಾಕತ್ತು ಅರಿಯಲು ಈ ಸಿನಿಮಾ ನೋಡಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಆದಿತ್ಯ ಧರ್ ಕೂಡ, ‘ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಸೇನಾ ಕಾರ್ಯಾಚರಣೆ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಸಿನಿಮಾ ನೋಡಿ ಮೆಚ್ಚಿದ್ದಾರೆ’ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲಿಗೆ, ಈ ಸಿನಿಮಾದ ಅಜೆಂಡಾ ಸ್ಪಷ್ಟವಾಗಿ ಹೋಗುತ್ತದೆ. ಉರಿ ಕಾರ್ಯಾಚರಣೆಯ ಯಶಸ್ಸನ್ನು ಸೇನೆಯಿಂದ ಅನಾಮತ್ತಾಗಿ ಕಸಿದು, ಮೋದಿಯವರ ಮಡಿಲಿಗಿಟ್ಟಿದ್ದಾರೆ ಆದಿತ್ಯ ಧರ್.

ಹಾಗೆ ನೋಡಿದರೆ, ‘ಉರಿ...’ ಮೇಕಿಂಗ್, ನಟನೆ, ಟೈಮಿಂಗ್ ಸೇರಿದಂತೆ ಎಲ್ಲವೂ ಹದವಾಗಿ ಬೆರೆತ ಒಳ್ಳೆಯ ಸಿನಿಮಾ. ಆದರೆ ಕೆಲವು ಸಂಭಾಷಣೆಗಳಲ್ಲಿ ಮತ್ತು ಪ್ರಚಾರದಲ್ಲಿ ಬಿಜೆಪಿ ಬಣ್ಣವನ್ನು ತುಂಬಿ ಅದರ ಸ್ವಾದವನ್ನೇ ಕೆಡಿಸಲಾಗಿದೆ. ಯಾವುದೇ ಸೃಜನಶೀಲ ಕಲೆಯನ್ನು ಕಲೆಯಾಗಿ ಮಾತ್ರ ನೋಡುವ ಕಾಲ ಇದಲ್ಲ. ಈ ನಿಟ್ಟಿನಲ್ಲಿ ‘ಉರಿ...’ ಚಲನಚಿತ್ರ ಲೋಕಸಭಾ ಚುನಾವಣೆಗಾಗಿ ನಿರ್ಮಿಸಿದ ಪ್ರಚಾರ ಸಾಮಗ್ರಿ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ.

ಇದು ಹೊಸತೇನಲ್ಲ. ಸೇನೆಯ ಕುರಿತು ಜನಸಾಮಾನ್ಯರಿಗಿರುವ ಭಾವುಕತೆಯನ್ನು ಬಂಡವಾಳ ಮಾಡಿಕೊಳ್ಳುವುದು ಬಲಪಂಥೀಯರ ಹಳೆಯ ಚಾಳಿ. ಅವರ ಈ ವರಸೆ ಸ್ವತಃ ಸೇನೆಗೂ ಮುಜುಗರ ತರಿಸಿದೆ. ಸೇನೆಯ ಕರ್ತವ್ಯವನ್ನು ಮೋದಿಯವರ ರಾಜಕೀಯ ಸಾಧನೆಯಂತೆ ಬಿಂಬಿಸುತ್ತಿರುವ ಬಗ್ಗೆ ಅದಕ್ಕೆ ಅಸಮಾಧಾನವಿದೆ. ಕಳೆದ ಡಿಸೆಂಬರ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್‌. ಹೂಡಾ ಅದನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ‘ಸರ್ಜಿಕಲ್ ಸ್ಟ್ರೈಕ್, ಸೇನೆಯ ಸಹಜ ಕಾರ್ಯಾಚರಣೆ. ಅದನ್ನು ರಾಜಕೀಯಗೊಳಿಸುವುದಾಗಲೀ ಅಬ್ಬರದ ಪ್ರಚಾರ ನೀಡುವುದಾಗಲೀ ಅಗತ್ಯವಿರಲಿಲ್ಲ’ ಎಂದು ನೇರವಾಗಿ ಹೇಳಿದ್ದರು. ಅಷ್ಟಾದರೂ ಬಿಜೆಪಿ ಮತ್ತು ಅದರ ಭಕ್ತರು ಎದೆ ತಟ್ಟಿಕೊಳ್ಳುವುದನ್ನು ನಿಲ್ಲಿಸಿಲ್ಲ.

ಸುಭಾಷ್‌ಚಂದ್ರ ಬೋಸ್ ಜನ್ಮದಿನದ (ಜ.23) ಹಿನ್ನೆಲೆಯಲ್ಲಿ ಸೇನೆಯ ಬಗ್ಗೆ ಮಾತಾಡುವಾಗ, ಅವರನ್ನೂ ಅವರ ಹೋರಾಟವನ್ನೂ ಬಲಪಂಥೀಯರು ತಮ್ಮ ಮುಡಿಗೇರಿಸಿಕೊಂಡ ಕಾರ್ಯತಂತ್ರ ನೆನಪಾಗುತ್ತದೆ.

ಸಂಘ ಪರಿವಾರದ ಮೊದಲ ತಲೆಮಾರು, ವೈಚಾರಿಕವಾಗಿ ಗಾಂಧಿ ಮತ್ತು ನೆಹರೂ ಜೊತೆ ಭಿನ್ನಾ
ಭಿಪ್ರಾಯ ಹೊಂದಿದ್ದ ಬೋಸರನ್ನೇ ತಮ್ಮ ಪಾಳಯಕ್ಕೆ ಸೆಳೆಯಲು ಯತ್ನಿಸಿತ್ತು. ಆದರೆ ಬೋಸ್, ಅವರಿಂದ ದೂರ ಉಳಿದಿದ್ದರು. ಮುಂದೆ, ಅವರ ಆಕಸ್ಮಿಕ ಸಾವಿನ ನಂತರ ಆವರೆಗೆ ಸಾಧಿಸಲಾಗದಿದ್ದ ಕೆಲಸವನ್ನು ಪರಿವಾರ ಒಂದೇ ಏಟಿಗೆ ನಡೆಸಿಬಿಟ್ಟಿತು. ವಿಮಾನ ಅಪಘಾತವನ್ನು ‘ಪಿತೂರಿ’ ಎಂದು ಕರೆದು, ನೆಹರೂ ಅವರನ್ನು ಅದರ ಹಿಂದೆ ಇರಿಸಿತು. ಗಾಂಧಿ ಮತ್ತು ನೆಹರೂಗೆ ಬೋಸ್ ಕುರಿತು ಇದ್ದ ಭಿನ್ನಾಭಿಪ್ರಾಯವನ್ನೇ ವೈಷಮ್ಯವೆಂದು ಬಿಂಬಿಸಿ, ತನ್ನ ಪಿತೂರಿ ಸಿದ್ಧಾಂತಕ್ಕೆ ರೆಕ್ಕೆ ಹಚ್ಚಿತು. ಬೋಸ್ ಕುರಿತು ಪುಸ್ತಕಗಳನ್ನು ಮುದ್ರಿಸಿತು. ದುಂಡು ಕನ್ನಡಕದ ಸುಭಾಷರಿಗೊಂದು ತಿಲಕವಿಟ್ಟು, ಅವರನ್ನು ಅಧಿಕೃತವಾಗಿ ‘ಹಿಂದೂ ವೀರ’ನನ್ನಾಗಿ ಮಾಡಿಬಿಟ್ಟಿತು.

ಈ ಅವಧಿಯಲ್ಲಿ ಕಮ್ಯುನಿಸ್ಟರು ‘ಸುಭಾಷ್‌ ಬಾಬು ಹಿಟ್ಲರ್ ಸಹಾಯ ಪಡೆಯಲು ಹೋಗಿದ್ದರು’ ಅನ್ನುವ ಆಕ್ಷೇಪ ಮುಂದಿಟ್ಟು ಅವರನ್ನು ದೂರವಿರಿಸಿದ್ದರು. ಇತ್ತ ಕಾಂಗ್ರೆಸ್ಸಿಗರೂ ನೆಹರೂ ಮನೆತನದ ಭಕ್ತಿಯಲ್ಲಿ ಮೈಮರೆತು, ಪರಿವಾರ ಹೆಣೆದಿದ್ದ ವೈಷಮ್ಯದ ಕಥೆಯನ್ನು ನೆಚ್ಚಿಕೊಂಡು ಅವರನ್ನು ದೂರವಿಟ್ಟಿದ್ದರು. ವಾಸ್ತವದಲ್ಲಿ ಬೋಸ್ ರಷ್ಯಾಕ್ಕೆ ತೆರಳಿ ಕಮ್ಯುನಿಸ್ಟರ ಸಹಾಯ ಪಡೆಯುವ ಉದ್ದೇಶ ಹೊಂದಿದ್ದುದು ಮಾತ್ರವಲ್ಲದೆ, ಬ್ರಿಟಿಷರನ್ನು ಮಣಿಸಲು ಅವರೇ ಸೂಕ್ತ ಎಂದು ಬಲವಾಗಿ ನಂಬಿದ್ದರು. ಈ ಅಂಶ ಎಡಪಂಥೀಯರಿಗೆ ಮನದಟ್ಟಾಗಿದ್ದು ತೀರಾ ಇತ್ತೀಚೆಗೆ. ಹತ್ತು – ಹನ್ನೆರಡು ವರ್ಷಗಳ ಹಿಂದೆ ಬುದ್ಧದೇವ್‌ ಭಟ್ಟಾಚಾರ್ಯ, ‘ನಾವು ಸುಭಾಷರನ್ನು ದೂರವಿಟ್ಟು ತಪ್ಪು ಮಾಡಿದೆವು’ ಎಂದು ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನವರದ್ದೂ ಇದೇ ಕಥೆ. ಬೋಸ್, ಎಲ್ಲ ಭಿನ್ನಾಭಿಪ್ರಾಯದ ನಡುವೆಯೂ ಗಾಂಧಿ ಮತ್ತು ನೆಹರೂ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಎಷ್ಟೆಂದರೆ, ಆಜಾದ್ ಹಿಂದ್ ಫೌಜ್‌ನ ಎರಡು ನೌಕೆಗಳಿಗೆ ಗಾಂಧಿ ಮತ್ತು ನೆಹರೂ ಹೆಸರನ್ನು ಇರಿಸುವಷ್ಟು
ಪ್ರಾಮಾಣಿಕವಾಗಿತ್ತು ಅವರ ಪ್ರೀತಿ! ನೆಹರೂ ಕೂಡ ‘ರೆಡ್‌ಫೋರ್ಟ್ ಟ್ರಯಲ್ಸ್’ ಎಂದೇ ದಾಖಲಾ
ಗಿರುವ ವಿಚಾರಣೆಯಲ್ಲಿ, ಆಜಾದ್ ಹಿಂದ್ ಫೌಜ್ ಪರ ವಕೀಲರಾಗಿ ನ್ಯಾಯಾಲಯದಲ್ಲಿ ವಾದ ನಡೆಸಿದ್ದರು. ಈ ಐತಿಹಾಸಿಕ ಸತ್ಯಗಳನ್ನು ಜನಸಾಮಾನ್ಯರಿಗಿರಲಿ, ಖುದ್ದು ಕಾಂಗ್ರೆಸ್ಸಿಗೂ ಯಾರೂ ಗಟ್ಟಿ ದನಿಯಲ್ಲಿ ಹೇಳಲೇ ಇಲ್ಲ.

ಇಂಥ ಅನುಕೂಲಕರ ಸನ್ನಿವೇಶದಲ್ಲಿ ಬೋಸರನ್ನು ಬಿಜೆಪಿ ತನ್ನ ಚುನಾವಣಾ ಭಾಷಣಗಳಲ್ಲಿಯೂ ಸೇರಿಸಿಕೊಂಡಿತು. ತಾನು ಅಧಿಕಾರಕ್ಕೆ ಬಂದರೆ ಸುಭಾಷರ ‘ರಹಸ್ಯ ಕಡತ’ಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿತು. ಅದರಂತೆ, ಮೋದಿ ಅಧಿಕಾರಕ್ಕೆ ಬಂದಮೇಲೆ ಸುಮಾರು 1,200 ರಹಸ್ಯ ಕಡತಗಳಿಗೆ ಮುಕ್ತಿಯೂ ಸಿಕ್ಕಿತು. ಆದರೆ ಅದರಲ್ಲಿ ಪರಿವಾರ ಹೇಳುತ್ತಿದ್ದ ‘ಪಿತೂರಿ ಸಿದ್ಧಾಂತ’ ಸಮರ್ಥಿಸುವ ಒಂದೇ ಒಂದು ಪುರಾವೆಯೂ ಸಿಗಲಿಲ್ಲ. ಆದ್ದರಿಂದಲೇ, ಕಡತ ಬಹಿರಂಗಗೊಳಿಸುವ ಮೊದಲು ಇದ್ದ ವೀರಾವೇಶದ ಒಂದಂಶವೂ ಈಗ ಕಂಡುಬರಲಿಲ್ಲ. ವಾಗ್ದಾನ ನೀಡಿದ್ದಂತೆ ‘ರಹಸ್ಯ ಕಡತ’ದ ವಿವರಗಳನ್ನು ‘ಮನೆಮನೆಗೆ ತಲುಪಿಸುವ’ ಕೆಲಸವೂ ಆಗಲಿಲ್ಲ. ಕಾರಣವಿಷ್ಟೇ, ಅದರಿಂದ ಈಗ ಬಲಪಂಥೀಯರಿಗೆ ನಯಾಪೈಸೆ ಲಾಭವೂ ಇಲ್ಲ! ಹಾಗೆಂದೇ ಅದು ಮಿಲಿಟರಿ ಉಡುಗೆಯ ಬೋಸ್ ಚಿತ್ರವನ್ನು ಮಾತ್ರ ಉಳಿಸಿಕೊಂಡು, ಮಿಕ್ಕೆಲ್ಲವನ್ನೂ ಗಾಳಿಗೆ ತೂರಿಬಿಟ್ಟಿತು.

ವಾಸ್ತವದಲ್ಲಿ ಬೋಸರ ರಾಷ್ಟ್ರೀಯತೆ ಬಲಪಂಥೀಯ ರಾಷ್ಟ್ರೀಯತೆಯಾಗಿರಲಿಲ್ಲ. ಹಿಂದುತ್ವ ಅಥವಾ ಅಂಧ ದೇಶಭಕ್ತಿ ಅವರ ಆದ್ಯತೆಯಾಗಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ, ಅವರು ‘ವಂದೇ ಮಾತರಂ’ ಅನ್ನೇ ತಮ್ಮ ಸೇನೆಯ ಘೋಷಣೆಯಾಗಿ ಬಳಸುತ್ತಿದ್ದರು. ಆದರೆ ಜಾತ್ಯತೀತ ಮೌಲ್ಯಗಳ ಸಮರ್ಥಕರಾಗಿದ್ದ ಬೋಸ್, ತಮ್ಮ ಸಹಚರ ಆಬಿದ್ ಹಸನ್ ಸಫ್ರಾಣಿ ನೀಡಿದ ‘ಜೈ ಹಿಂದ್’ ಘೋಷಣೆಯನ್ನು ಆಜಾದ್ ಹಿಂದ್ ಫೌಜ್‌ನ ಅಧಿಕೃತ ಘೋಷಣೆಯಾಗಿ ಮಾಡಿಕೊಂಡರು. ಬಲಪಂಥೀಯರು ಕಟ್ಟಿಕೊಡುತ್ತಿರುವ ಚಿತ್ರಕ್ಕಿಂತ ಬೋಸ್ ಎಷ್ಟು ಭಿನ್ನವಾಗಿದ್ದರೆಂದು ಸಾರಲು ಇಷ್ಟು ನಿದರ್ಶನ ಸಾಲದೇ?

‘ಜನರನ್ನು ಬಹಳ ಕಾಲದವರೆಗೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎಂಬ ಮಾತಿದೆ. ಮಳೆ ಬಿದ್ದಾಗ ನೀಲಿ ನರಿಯ ಬಣ್ಣ ಕೊಚ್ಚಿಹೋಗಲೇಬೇಕು. ಆ ದಿನ ಹೆಚ್ಚು ದೂರವಿಲ್ಲ ಅನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT